ADVERTISEMENT

‘ಕನ್ನಡ ಕಲಿಸಿದ ರಂಗಭೂಮಿ’

‘ರಂಗದಿಬ್ಬಣ’ದಲ್ಲಿ ‘ಕಾರಂತ ರತ್ನ’ ಪ್ರಶಸ್ತಿ ಸ್ವೀಕರಿಸಿದ ಶಿವಶಂಕರ ನಾಯ್ಡು ಮಾತು

​ಪ್ರಜಾವಾಣಿ ವಾರ್ತೆ
Published 25 ಮೇ 2017, 10:01 IST
Last Updated 25 ಮೇ 2017, 10:01 IST

ಬಳ್ಳಾರಿ:‘ತೆಲುಗು ಮಾತೃಭಾಷೆಯಾದ ನನಗೆ ರಂಗಭೂಮಿಯು ಕನ್ನಡವನ್ನು ಕಲಿಸಿತು’ ಎಂದು ಕಲಾವಿದ ಶಿವಶಂಕರ ನಾಯ್ಡು ಹೆಮ್ಮೆಪಟ್ಟರು.

ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ಕಾರಂತ ರಂಗ ಲೋಕ ಸಂಸ್ಥೆಯು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ‘ರಂಗದಿಬ್ಬಣ–2017’ ಕಾರ್ಯಕ್ರಮದಲ್ಲಿ  ‘ಕಾರಂತ ರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ತೆಲುಗಿನಲ್ಲೇ ಶಿಕ್ಷಣ ಪಡೆದು ಮುಂದು ವರಿದರೂ, ರಂಗಭೂಮಿಗೆ ಪ್ರವೇಶದ ಪಡೆದ ಬಳಿಕವೇ ಕನ್ನಡ ಕಲಿಯಲು ಸಾಧ್ಯವಾಗಯಿತು’ ಎಂದರು.

‘ರಂಗಭೂಮಿಯನ್ನು ಯುದ್ಧ ಭೂಮಿ ಎನ್ನುತ್ತಾರೆ. ಅದಷ್ಟೇ ಅಲ್ಲ. ಅದನ್ನು ಯೋಗಭೂಮಿ ಎಂದೂ ಕರೆಯಬೇಕು. ವಕೀಲ ವೃತ್ತಿಯಿಂದ ಸಹಜವಾಗಿ ಶತ್ರುಗಳು ಹೆಚ್ಚಿದ್ದ ನನಗೆ ರಂಗಭೂಮಿಯು ಹೆಚ್ಚು ಮಿತ್ರರು ಹಾಗೂ ಅಭಿಮಾನಿಗಳನ್ನು ಒದಗಿಸಿತು’ ಎಂದರು.

ನೆನಪು: ಕಾರ್ಯಕ್ರಮವನ್ನು ಉದ್ಘಾಟಿ ಸಿದ ಹಿರಿಯ ಕಲಾವಿದೆಯರಾದ ಸುಭ ದ್ರಮ್ಮ ಮನ್ಸೂರು, ವೀಣಾ ಕುಮಾರಿ ಅವರೊಂದಿಗೆ ತಾವು ನಟಿಸಿದ ನೆನಪು ಗಳನ್ನು ಉಲ್ಲೇಖಿಸಿದ ಅವರು, ‘ರಕ್ತ ರಾತ್ರಿ’ ನಾಟಕ ಪಡೆದಿದ್ದ ಜನಪ್ರಿಯ ತೆಯ ಕುರಿತೂ ಸಭಿಕರ ಗಮನ ಸೆಳೆದರು.

‘ರಂಗಕಲೆಗೆ ಹೆಚ್ಚು ಪ್ರೋತ್ಸಾಹ ಅಗತ್ಯ. ಸಿನಿಮಾ ಪ್ರಭಾವದ ನಡುವೆ ಉಚಿತ ವಾಗಿ ನಾಟಕ ಪ್ರದರ್ಶನ ನಡೆದರೂ ಹೆಚ್ಚು ಪ್ರೇಕ್ಷಕರು ಕಂಡು ಬರುವುದಿಲ್ಲ. ಯುವಜನ ಇಂಥ ಸನ್ನಿವೇಶವನ್ನು ಬದ ಲಿಸಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಾಣಾಪುರ ನಾಗಭೂಷಣಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ, ಸಹಾಯಕ ಪ್ರಾಧ್ಯಾ ಪಕ ಶಶಿಕಾಂತ ಬಿಲ್ಲವ, ಸಂಸ್ಥೆಯ ಅಧ್ಯಕ್ಷ ಕೆ.ಮಹೇಂದ್ರ, ಆರ್‌.ಪಿ.ಮಂಜುನಾಥ ಉಪಸ್ಥಿತರಿದ್ದರು. ವೆಂಕಟೇಶ್ವರ ಕೂಚು ಪುಡಿ ಕಲಾ ಕ್ಷೇತ್ರದ ವಿದ್ಯಾರ್ಥಿನಿ ಬಿ.ಶ್ರೇಯಾ ನೃತ್ಯ ಪ್ರದರ್ಶಿಸಿದರು. ಪರಶು ರಾಮ ಹಂದ್ಯಾಳ್‌ ತತ್ವಪದ ಹಾಡಿದರು.

ತನ್ಮಯಗೊಳಿಸಿದ ‘ಅಂತಿಗೊನೆ’
ರಂಗದಿಬ್ಬಣದ ಪ್ರಯುಕ್ತ ಥಿಯೇಟರ್‌ ಸಮುರಾಯ್‌ ತಂಡದ ಆರು ಕಲಾವಿದರು ಅಭಿನಯಿಸಿದ ಗ್ರೀಕ್‌ನ ಪ್ರಸಿದ್ಧ ದುರಂತ ನಾಟಕ ‘ಅಂತಿಗೊನೆ’ ಪ್ರೇಕ್ಷಕರನ್ನು ತನ್ಮಯಗೊಳಿಸಿತ್ತು. ಒಂದೂವರೆ ಗಂಟೆ ಕಾಲ ನಡೆದ ಪ್ರದರ್ಶನವನ್ನು ನೂರಾರು ವಿದ್ಯಾರ್ಥಿಗಳು, ಮಧ್ಯಾಹ್ನದ ಹಸಿವನ್ನೂ ಮರೆತು ವೀಕ್ಷಿಸಿದರು.

ನಾಟಕದ ಪ್ರಮುಖ ‘ಅಂತಿಗೊನೆ’ ಪಾತ್ರ ನಿರ್ವಹಿಸಿದ ಪ್ರತಿಭಾ ಗಿರಿರಾಜ್‌, ‘ಇಸ್ಮೇನೆ’ ಪಾತ್ರಧಾರಿ ವಿ.ಶೃತಿ, ‘ಕಾವಲುಗಾರ’ ಪಾತ್ರಧಾರಿ ಕುಮಾರ್‌ ಬಾದಾಮಿ ತಮ್ಮ ಶ್ರಮಪೂರ್ಣವಾದ ದೇಹಭಾಷೆಯಿಂದ ವಿಶೇಷ ಗಮನ ಸೆಳೆದರು. 

ADVERTISEMENT

ನಾಟಕ ಪ್ರದರ್ಶನಕ್ಕೆ ವೇದಿಕೆಯು ಹೆಚ್ಚು ಅನುಕೂಲಕರವಾಗಿಲ್ಲದಿದ್ದರೂ ಕಲಾವಿದರು ಪ್ರತಿಭಾ ವಿಲಾಸವನ್ನು ಮೆರೆದರು. ಕೆ.ಪ್ರಥ್ವಿನ್‌ (ಕ್ರೆಯಾನ್‌), ನವೀನ್‌ ಪ್ರತಾಪ್‌ (ಹಯ್ಮೋನ್‌),  ಎಂ,.ಗಣೇಶ್‌ (ಕಾವಲುಗಾರ)–ಪಾತ್ರ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.