ADVERTISEMENT

ಕೋಮು ಸೌಹಾರ್ದ, ಭಾವೈಕ್ಯದ ಉರುಸ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 5:05 IST
Last Updated 18 ಮಾರ್ಚ್ 2017, 5:05 IST
ಹೂವಿನಹಡಗಲಿ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ದರಗಾದಲ್ಲಿ ಮಠಾಧೀಶರು  ಮಹಾಮಂಗಳಾರತಿ ನೆರವೇರಿಸಿ ಉರುಸು ಆಚರಣೆಗೆ ಚಾಲನೆ ನೀಡಿದರು
ಹೂವಿನಹಡಗಲಿ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ದರಗಾದಲ್ಲಿ ಮಠಾಧೀಶರು ಮಹಾಮಂಗಳಾರತಿ ನೆರವೇರಿಸಿ ಉರುಸು ಆಚರಣೆಗೆ ಚಾಲನೆ ನೀಡಿದರು   

ಹೂವಿನಹಡಗಲಿ: ಇಲ್ಲಿನ ಹಜರತ್ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ದರಗಾದಲ್ಲಿ ಶುಕ್ರವಾರ ಹಿಂದೂ–ಮುಸ್ಲಿಮರ ಭಾವೈಕ್ಯದ ಉರುಸ್ ಕಾರ್ಯಕ್ರಮ ವಿಜೃಂಭಣೆ ಯಿಂದ ಜರುಗಿತು.

ಗುರುವಾರ ರಾತ್ರಿ ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ,  ಬಸವಕಲ್ಯಾಣದ ರಾಜಬಾಗ್ ಸವಾರ್ ಸಜ್ಜಾದ ನಶೀನ್, ಚಳಗೇರಿಯ ಸೂಫಿ ಸೈಯ್ಯದ್ ಔಲಿಯಾ ಶಾ ಖಾದ್ರಿ ಅವರು ದರಗಾದಲ್ಲಿ ಮಹಾಮಂಗಳಾರತಿ ನೆರ ವೇರಿಸಿ ಉರುಸ್ ಆಚರಣೆಗೆ ಚಾಲನೆ ನೀಡಿದರು.

ರಾತ್ರಿ ಜರುಗಿದ ವಿಜೃಂಭಣೆಯ ಗಂಧ ಮಹೋತ್ಸವ ಮೆರವಣಿಗೆಯಲ್ಲಿ ಸ್ವಾಮೀಜಿಗಳು ಹಾಗೂ ಮೌಲ್ವಿಗಳು ಸಾರೋಟ ವಾಹನದಲ್ಲಿ ಪಾಲ್ಗೊಂಡು ಭಾವೈಕ್ಯದ ಸಂದೇಶ ಸಾರಿದರು.

ADVERTISEMENT

ಇದಕ್ಕೂ ಮುನ್ನ ಜರುಗಿದ ಪ್ರವಚನ ದಲ್ಲಿ ಡಾ. ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಮಲ್ಲಿಗೆ ನಾಡಿನಲ್ಲಿ ಜಾತಿ, ಧರ್ಮ ಮೀರಿ ಮಾನವೀಯ ಸಂಬಂಧ ಗಳು ಬೆಸೆದಿರುವ ಕಾರಣಕ್ಕೆ ಶತಮಾನ ಗಳಿಂದ ಇಂತಹ ಸಾಮರಸ್ಯದ ಉರುಸ್ ನಡೆಯುತ್ತಿದೆ. ಈ ಮೌಲ್ಯವನ್ನು ಎಲ್ಲರೂ ಪರಿಪಾಲಿಸಬೇಕು ಎಂದರು.

ಬಸವಕಲ್ಯಾಣದ ರಾಜಬಾಗ್ ಸವಾರ್ ಸಜ್ಜಾದ ನಶೀನ್ ಮಾತನಾಡಿ, ‘ಜಾತಿ, ಮತ, ಪಂಥ ರಹಿತ ಸೌಹಾರ್ದ ಸಮಾಜ ಕಟ್ಟುವುದು ಶರಣರು, ಸಂತರ ಆಶಯವಾಗಿತ್ತು. ಇಂತಹ ಉರುಸ್ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಒಟ್ಟಾಗಿ ಆಚರಿಸುವುದರಿಂದ ಭಾವೈಕ್ಯತೆ ಗಟ್ಟಿಗೊಳ್ಳುತ್ತದೆ. ಸೌಹಾರ್ದತೆಗೆ ಚ್ಯುತಿ ಬಾರದಂತೆ ಎಲ್ಲರೂ ಈ ಪರಂಪರೆ ಯನ್ನು ಮುನ್ನಡೆಸಿಕೊಂಡು ಹೋಗ ಬೇಕು’ ಎಂದು ಕರೆ ನೀಡಿದರು.

(ಹೂವಿನಹಡಗಲಿ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ದರಗಾದಲ್ಲಿ ಮೌಲ್ವಿಗಳು ಮಹಾಮಂಗಳಾರತಿ ನೆರವೇರಿಸಿ ಉರುಸು ಆಚರಣೆಗೆ ಚಾಲನೆ ನೀಡಿದರು)

ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಿವಿಧ ಸಮಾಜದ ಮುಖಂಡರಾದ ಸಿ.ಚಾಂದಸಾಹೇಬ್,  ಎಲ್.ಜಿ.ಹೊನ್ನಪ್ಪನವರ, ಎಚ್.ಬೀರಪ್ಪ, ವಾರದ ಗೌಸ್‌ ಮೊಹಿದ್ದೀನ್, ಕಾಗದ ಗೌಸ್‌ ಮೊಹಿದ್ದೀನ್, ತಾ.ಪಂ. ಸದಸ್ಯ ಜೆ.ಶಿವರಾಜ್, ಪುರಸಭೆ ಸದಸ್ಯ ಎನ್. ಇರ್ಫಾನ್ ಇದ್ದರು.

ಶುಕ್ರವಾರ ಬೆಳಗಿನ ಜಾವ ದರ್ಗಾ ಬಳಿ ವಂಶಪರಂಪರೆಯ ಮುಜಾವರರು ಸಾಂಪ್ರದಾಯಿಕವಾಗಿ ನೀರಿನಲ್ಲಿ ದೀಪ ಉರಿಸಿದರು. ಪವಾಡ ರೀತಿಯಲ್ಲಿ ನಡೆದ ಗಂಧ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಉರುಸ್ ಅಂಗವಾಗಿ ಬೆಳಗಿನ ಜಾವದಿಂದಲೇ ಹಿಂದೂ– ಮುಸ್ಲಿಮರು ಏಕಕಾಲಕ್ಕೆ ಆಗಮಿಸಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರಿಂದ ಇಲ್ಲಿನ ದರ್ಗಾ ಭಾವೈಕ್ಯ ಸಂಗಮವಾಗಿ ರೂಪುಗೊಂಡಿತ್ತು.

ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿ ದೀಡ ನಮಸ್ಕಾರ ಹಾಕುವುದು, ತಮ್ಮ ಮಕ್ಕಳ ತೂಕದ ಸಕ್ಕರೆ ಅರ್ಪಿಸುವುದು, ದರ್ಗಾ ಮುಂಭಾಗದಲ್ಲಿ ಕೊಬ್ಬರಿ, ಉಪ್ಪು ಸುಡುವ ಬಗೆ ಬಗೆಯ ಹರಕೆಗಳನ್ನು ಎಲ್ಲಾ ಭಕ್ತರು ಒಟ್ಟಾಗಿ ತೀರಿಸಿ ಧಾರ್ಮಿಕ ಸಾಮರಸ್ಯ ಮೆರೆದರು.

ಉರುಸ್ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಹಾಗೂ ನೆರೆಯ ದಾಣಗೆರೆ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಭಕ್ತರು ಪಾಲ್ಗೊಂಡು ಬಾಬಾ ಅವರ ದರ್ಶನ,  ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.