ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ನೆಲ್ಕುದ್ರಿ–2 ಗ್ರಾಮದಲ್ಲಿದ್ದ ಗ್ರಾಮ ಪಂಚಾಯಿತಿ ಕಚೇರಿಯನ್ನು ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಗುರುವಾರ ತಹಶೀಲ್ದಾರ್ ಎಸ್.ಮಹಾಬಲೇಶ್ವರ್ ಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎಂ.ಜಯಾನಂದ ಮಾತನಾಡಿ, ನೆಲ್ಕುದ್ರಿ–2 ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆ ಇದ್ದು ಐದು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಒಂದರಿಂದ ಎಂಟನೇ ತರಗತಿ ವರೆಗೂ ಸರ್ಕಾರಿ ಶಾಲೆ ಇದೆ. ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿದ ಗ್ರಾಮ ಇದಾಗಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಇತರೆ ಎಲ್ಲ ಗ್ರಾಮಗಳಿಗೂ ಅನುಕೂಲ ಆಗುವಂತೆ ಮಧ್ಯ ಕೇಂದ್ರದಲ್ಲಿದೆ. ಈಗ ಏಕಾಏಕಿ ಪಂಚಾಯಿತಿ ಕಚೇರಿಯನ್ನು ಕೇವಲ ಒಬ್ಬ ಸದಸ್ಯರು ಇರುವ ನೆಲ್ಕುದ್ರಿ–1ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಏಪ್ರಿಲ್ 13ರಂದು ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೇವಲ ರಾಜಕೀಯ ಹಿತಾಸಕ್ತಿಯಿಂದ ಕಚೇರಿ ಸ್ಥಳಾಂತರಿಸುವ ಆದೇಶ ಬಂದಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಗ್ರಾಮದಲ್ಲಿ ಈ ಮೊದಲು ಇದ್ದಂತೆ ಗ್ರಾಮ ಪಂಚಾಯಿತಿ ಕಚೇರಿಯನ್ನು ಸ್ಥಾಪಿಸದಿದ್ದರೆ ವಿಧಾನಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸಲಾಗುವುದು. ಈ ಕುರಿತಂತೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಹುಚ್ಚಪ್ಪ, ವಿ.ನಾಗರಾಜ, ಕೆ.ಸುಮಲತಾ ಶಿವಪ್ಪ, ನಾಗರತ್ನಮ್ಮ ಕೊಟ್ರೇಶ್, ಮುಖಂಡರಾದ ಶಿವಕುಮಾರ್, ಅಲಬೂರು ಮಂಜುನಾಥ, ಕರಿಬಸಪ್ಪ, ಮಡಿವಾಳರ ಕೊಟ್ರೇಶ್, ಪಿ.ರುದ್ರಪ್ಪ, ಎಂ.ಜಿ.ಯಲ್ಲಪ್ಪ, ಕಡ್ಲಿ ಶಿವಪ್ಪ, ವಾಲೆಕಾರ ಪ್ರಕಾಶ, ಜಿ.ಗುರುವಪ್ಪ, ಶೇಖರಪ್ಪ, ಎಂ.ನಾಗರಾಜ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.