ಬಳ್ಳಾರಿ: ಕಳೆದ ನವೆಂಬರ್ನಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯೊಂಡಿದ್ದ ಗಣಿ ಉದ್ಯಮಿ ಟಪಾಲ್ ಗಣೇಶ್ ಐದು ತಿಂಗಳು ಮುಗಿವ ಮುಂಚೆಯೇ ಪಕ್ಷದಿಂದ ಹೊರಬರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
‘ಜಿಲ್ಲೆಯಲ್ಲಿ ಜೆಡಿಯು ಪಕ್ಷವನ್ನು ಬಲಗೊಳಿಸುವ ಕಡೆ ಗಮನ ಹರಿಸಿದ್ದು, ಪಕ್ಷದ ಮುಖಂಡ ನಿತೀಶ್ಕುಮಾರ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡರ ಮೂಲಕ ಸಂಪರ್ಕಿ ಸಿರುವೆ. ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಅಸಮಾಧಾನ: ಕಳೆದ ವರ್ಷ ನವೆಂಬರ್ ನಲ್ಲಿ ಗಣೇಶ್ ಅವರು ಬೆಂಗಳೂರಿನಲ್ಲಿ ಎಎಪಿಗೆ ಸೇರಿದಾಗ ಸ್ಥಳೀಯ ಮುಖಂ ಡರು ಅಸಮಾಧಾನಗೊಂಡಿದ್ದರು. ‘ಗಣೇಶ್ ಅಕ್ರಮ ಗಣಿಗಾರಿಕೆ ವಿರುದ್ಧದ ಚಟುವಟಿಕೆಗಳಲ್ಲಷ್ಟೇ ಪಾಲ್ಗೊಂಡಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಎಂದಿಗೂ ಸ್ಪಂದಿಸಿಲ್ಲ. ಹೀಗಾಗಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ ಅವರಿಗೆ, ಸೇರ್ಪಡೆಗೆ ಮುಂಚೆಯೇ ಪತ್ರ ಬರೆದಿ ದ್ದರೂ ಪ್ರಯೋಜನವಾಗಲಿಲ್ಲ’ ಎಂಬ ಅಸಮಾಧಾನ ಅವರಲ್ಲಿ ಇತ್ತು.
ನಂತರದ ದಿನಗಳಲ್ಲಿ, ಸ್ಥಳೀಯ ಮುಖಂಡರು ಮತ್ತು ಗಣೇಶ್ ನಡುವೆ ಇದೇ ವಿಚಾರಕ್ಕೆ ಮುನಿಸು ಏರ್ಪಟ್ಟಿತ್ತು ಎನ್ನಲಾಗಿದೆ. ಅದು ಈಗ, ಗಣೇಶ್ ಪಕ್ಷ ಬಿಡುವುದರ ಮೂಲಕ ಮುಕ್ತಾಯ ಕಂಡಂತೆ ಆಗಿದೆ. ಆಪ್ ಸೇರುವ ಮುನ್ನ ಟಪಾಲ್ ಗಣೇಶ್ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲೂ ಗುರುತಿಸಿಕೊಂಡಿದ್ದರು.
ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಸಂದರ್ಭದಲ್ಲಿ, ಅನಿಲ್ಲಾಡ್ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿ ಸಲು ಪಕ್ಷ ಟಿಕೆಟ್ ನೀಡಿದ್ದನ್ನು ವಿರೋ ಧಿಸಿ ಹೊರಬಂದಿದ್ದರು. ಜನಾರ್ದರೆಡ್ಡಿ ಅವರನ್ನು ಉಚ್ಛಾಟಿಸಿ ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದನ್ನು ವಿರೋಧಿಸಿ ಅಲ್ಲಿಂದಲೂ ಹೊರ ಬಂದಿದ್ದರು.
ಈಗ ಆಪ್ ಪಕ್ಷದಿಂದಲೂ ಹೊರ ಬಂದಿರುವ ಅವರು, ಜೆಡಿಯು ಪಕ್ಷಕ್ಕೆ ಕಾಲಿರಿಸಲಿದ್ದಾರೆ. ಗಣೇಶ್ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಲು ಎಎಪಿ ಪಕ್ಷದ ರಾಜ್ಯ ಸಹ ಸಂಚಾಲಕ ಮೋಹನ್ ದಾಸರಿ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
ಮುಖಂಡರು ಕಾರ್ಯಕರ್ತರಲ್ಲ!
‘ಯಾರ ಜತೆ ಭಿನ್ನಾಭಿಪ್ರಾಯ ಇಲ್ಲ. ಆದರೆ ಪಕ್ಷದಿಂದ ಹೊರಗೆ ಬರುತ್ತಿದ್ದೇನೆ ಅಷ್ಟೇ’ ಎನ್ನುವ ಟಪಾಲ್ ಗಣೇಶ್, ‘ಪಕ್ಷದಲ್ಲಿ ತಮ್ಮನ್ನು ಮುಖಂಡನಂತೆ ಪರಿ ಭಾವಿಸದೆ, ಸಾಮಾನ್ಯ ಕಾರ್ಯಕರ್ತ ನಂತೆ ಮಾತ್ರ ನೋಡಲಾಗುತ್ತಿತ್ತು. ತಾವು ಏನು ಮಾತನಾಡಬೇಕು ಅಥವಾ ಮಾತನಾಡಬಾರದು ಎಂಬುದರ ಮೇಲೂ ನಿರ್ಬಂಧ ಹೇರಲಾಗತ್ತು’ ಎನ್ನುತ್ತಾರೆ.
‘ಭ್ರಷ್ಟಾಚಾರದ ವಿರುದ್ಧದ ತಮ್ಮ ನಿಲುವುಗಳಿಗೆ ಆಪ್ ಹೊಂದಿಕೆ ಆಗುವುದರಿಂದ ಸೇರ್ಪಡೆ ಆಗುತ್ತಿರುವೆ’ ಎಂದು ಸೇರ್ಪಡೆ ವೇಳೆ ಹೇಳಿದ್ದ ಅವರು, ‘ಈಗಲೂ ಭ್ರಷ್ಟಾಚಾರದ ವಿರುದ್ಧವೇ ನನ್ನ ಹೋರಾಟ’ ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.