ADVERTISEMENT

‘ಪ್ರಧಾನ ಸಂಸ್ಕೃತಿಯೊಂದಿಗೆ ಶ್ರಮ ಸಂಸ್ಕೃತಿ ದಾಖಲಾಗಲಿ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 10:03 IST
Last Updated 15 ಜುಲೈ 2017, 10:03 IST

ಹೊಸಪೇಟೆ: ‘ದೇಶದಲ್ಲಿನ ಪ್ರಧಾನ ಸಂಸ್ಕೃತಿ ಕುರಿತು ಮಾತನಾಡುವಂತೆ ಎಲ್ಲ ಶ್ರಮ ಸಂಸ್ಕೃತಿ ಹಾಗೂ ಸಮ ಸಂಸ್ಕೃತಿಗಳ ಬಗ್ಗೆಯೂ ಮಾತನಾಡ ಬೇಕು. ಸಮ ಸಂಸ್ಕೃತಿಯ ಸಾಂಸ್ಕೃತಿಕ ಚಹರೆಗಳೇನು?, ಸಾಂಸ್ಕೃತಿಕವಾಗಿ ಹೇಗೆ ಭಿನ್ನವಾಗಿದೆ ಎಂಬುದನ್ನು ದಾಖಲಿಸುವ ಕೆಲಸ ಆಗಬೇಕು’ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾ ಅಧ್ಯಯನ ವಿಭಾಗ, ಬಂಜಾರ ಭಾಷಾ ಅಭಿವೃದ್ಧಿ ಕೇಂದ್ರದ ಸಹಭಾಗಿತ್ವದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ‘ಬಂಜಾರ ಭಾಷೆ, ಸಮಾಜ ಮತ್ತು ಸಂಸ್ಕೃತಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಆಶಯ ನುಡಿಗಳನ್ನು ಆಡಿದರು.

‘ಪ್ರಧಾನ ಸಂಸ್ಕೃತಿಯ ಜತೆಗೇ ಇತರ ಸಂಸ್ಕೃತಿಗಳು ಕೂಡ ಬಹಳ ಮುಖ್ಯ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಬದ್ಧತೆ ತೋರಿ, ಬಂಜಾರ ಭಾಷೆಯ ಬೆಳವಣಿಗೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಬಂಜಾರ ಭಾಷೆ ಮಾತನಾಡುವ ಜನ ದೇಶದಾದ್ಯಂತ ಚದುರಿ ಹೋಗಿದ್ದಾರೆ. ದೇಶದಾದ್ಯಂತ ಸುಮಾರು ಆರು ಕೋಟಿ ಬಂಜಾರ ಸಮುದಾಯದವರು ಇದ್ದಾರೆ. ಹಾಗಾಗಿ ಸಮಗ್ರ ಭಾರತದಲ್ಲಿನ ಬಂಜಾರ ಭಾಷೆಯ ಅಧ್ಯಯನ ಅತ್ಯಗತ್ಯ’ ಎಂದು ಹೇಳಿದರು.

ADVERTISEMENT

‘ಬಂಜಾರ ಸಮಾಜಕ್ಕೆ ಭಾಷೆ ಇದೆ. ಆದರೆ, ಲಿಪಿ ಇಲ್ಲ. ಈ ಭಾಷೆಗೆ ಒಂದು ಲಿಪಿ ಮಾಡಲು ನನ್ನ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿದೆ. ದೇವನಾಗರಿ ಲಿಪಿ ಅಳವಡಿಕೆಗೆ ಸರ್ಕಾರ ಒಪ್ಪಿ ಕೊಂಡಿದೆ. ಆದರೆ, ಅದರಲ್ಲಿನ ಕೆಲವು ಅಕ್ಷರಗಳ ಉಚ್ಛಾರ ನೋಡಿದರೆ ಸರಿ ಹೊಂದುವುದಿಲ್ಲ.

ಆ ಸೂಕ್ಷ್ಮಗಳ ಕಡೆಗೆ ಗಮನಹರಿಸಿ ಮುಂದುವರೆಯಬೇಕಿದೆ’ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಮುಜರಾಯಿ ಸಚಿವ ರುದ್ರಪ್ಪ ಎಂ. ಲಮಾಣಿ ಮಾತನಾಡಿ, ‘ಬಂಜಾರ ಸಮಾಜದ ಆರಾಧ್ಯ ದೈವ ಸೇವಾಲಾಲ್‌ ಅವರ ಜನ್ಮಸ್ಥಳವಾಗಿರುವ ದಾವಣ ಗೆರೆಯ ಸೂರಗೊಂಡನಕೊಪ್ಪ ವನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ಅದನ್ನು ಬಂಜಾರ ಸಮಾಜದ ಪವಿತ್ರ ಯಾತ್ರಾ ಸ್ಥಳದ ಜತೆಗೇ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗು ವುದು’ ಎಂದು ಹೇಳಿದರು. ‘ಬಂಜಾರ ಸಮಾಜವನ್ನು ಈಗಲೂ ಬಡ ತನ ಕಾಡುತ್ತಿದೆ. ಈ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿ ಕೊಂಡಿದೆ. ಇದರ ಪರಿಣಾಮ ವಲಸೆ ಕಡಿಮೆಯಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಂಪಿ ಕನ್ನಡ ವಿ.ವಿ. ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ, ‘ತಳ ಸಮು ದಾಯಗಳ ಸಂಸ್ಕೃತಿಯನ್ನು ದಾಖಲಿಸುವ ಕೆಲಸ ವಿ.ವಿ.ಮಾಡುತ್ತಿದೆ. ಆದರೆ, ವಿ.ವಿ. ಆರ್ಥಿಕವಾಗಿ ಬಳಲುತ್ತಿದೆ. ಸರ್ಕಾರ ಅದನ್ನು ದೂರ ಮಾಡಬೇಕು. ವಿ.ವಿ.ಬೆಳ್ಳಿ ಹಬ್ಬ ಆಚರಣೆಗೆ ಘೋಷಿಸಿದ್ದ ₹25 ಕೋಟಿ ಅನುದಾನದ ಪೈಕಿ ₹12.66 ಕೋಟಿಯಷ್ಟೇ ನೀಡುವುದಾಗಿ ಆರ್ಥಿಕ ಇಲಾಖೆ ತಿಳಿಸಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.