ಬಳ್ಳಾರಿ: ಮರಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
‘ಮರಳು ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಕಟ್ಟಡ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತಿಲ್ಲ. ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಗುಳೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯಲ್ಲಿ 17 ಮರಳು ಬ್ಲಾಕ್ಗಳಿದ್ದರೂ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಕೂಡಲೇ ಬೇರೆ ಜಿಲ್ಲೆಗೆ ಮರುಳು ಸಾಗಣೆ ಮಾಡುವುದನ್ನು ನಿಲ್ಲಿಸಬೇಕು’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಮಾರೆಣ್ಣ ಆಗ್ರಹಿಸಿದರು.
‘ಕಟ್ಟಡ ಕಾರ್ಮಿಕರಿಗೆ ಇಲಾಖೆ ನೀಡುವ ವಿವಾಹ ಧನಸಹಾಯವನ್ನು ₹1 ಲಕ್ಷಕ್ಕೆ ಏರಿಸಬೇಕು. ಪಿಂಚಣಿ ವಯೋ ಮಿತಿ 60 ವರ್ಷವಿದ್ದು, ಅದನ್ನು 50ಕ್ಕೆ ಇಳಿಸಬೇಕು. ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಧನಸಹಾಯ ಹೆಚ್ಚಿಸಬೇಕು. ಆರೋಗ್ಯ ಸೇವೆಗಳ ಸೌಲಭ್ಯ ನೀಡಬೇಕು. ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಶೇಖರ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಶಿವಪ್ಪ, ರಾಮಾಂಜಿನಿ, ಬಾದಾಮಿ ಶಿವಲಿಂಗ ನಾಯಕ, ಟಿ.ಎಂ.ಪಂಪಾಪತಿ, ಈ.ಜಿ.ರೆಡ್ಡಿ, ಜಿ.ಬಸವರಾಜ, ಬಿ.ರಾಮುಡು, ವಿ.ಶ್ರೀನಿವಾಸುಲು, ವಿ.ರಾಮಾಂಜಿನೇಯ, ನಾಗಭೂಷಣ. ಬಿ, ವಿ.ಈರೇಶ್, ಬಸವರಾಜ, ವೀರಪ್ಪ, ನಾಗರಾಜ, ಸಿದ್ದನಗೌಡ, ಜಿಲಾನ್ ಬಾಷಾ, ಹೊನ್ನೂರ್ ಸ್ವಾಮಿ, ಆರ್.ಹುಲುಗೇಶ್, ಕೆ.ಎರ್ರಿಸ್ವಾಮಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.