ADVERTISEMENT

ಯಾರಿಗೆ ಲಾಭ, ಯಾರಿಗೆ ನಷ್ಟ?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಸೆಪ್ಟೆಂಬರ್ 2017, 6:14 IST
Last Updated 5 ಸೆಪ್ಟೆಂಬರ್ 2017, 6:14 IST

ಹೊಸಪೇಟೆ: ಸತತ ನಾಲ್ಕನೆಯ ಬಾರಿಗೆ ಶಾಸಕ ಆನಂದ್‌ ಸಿಂಗ್‌ ಅವರು ಬಯ ಸಿದ ವ್ಯಕ್ತಿಯೇ ನಗರಸಭೆ ಅಧ್ಯಕ್ಷ ರಾಗಿದ್ದಾರೆ. ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರ ದ ಗದ್ದುಗೆ ಏರಿ ನಾಲ್ಕು ವರ್ಷ ಎರಡು ತಿಂಗಳು ಕಳೆದಿವೆ. ಆದರೆ, ಮೊದಲಿ ನಿಂದಲೂ ಹಿಂಬಾಗಿಲಿನ ಮೂಲಕ ಅಧಿಕಾರ ಚಲಾಯಿಸುತ್ತಿರುವವರು ಬಿಜೆಪಿ ಶಾಸಕ ಆನಂದ್‌ ಸಿಂಗ್‌. ಈ ವಿಷಯ ಈಗ ಗುಟ್ಟಾಗಿಯೇನೂ ಉಳಿ ದಿಲ್ಲ. ಈ ಬಾರಿಯೂ ಅವರು ಸೂಚಿಸಿದ ನಗರಸಭೆ ಸದಸ್ಯೆ ಕೆ. ನಾಗಲಕ್ಷ್ಮಮ್ಮ ಅಧ್ಯಕ್ಷೆಯಾಗಿದ್ದಾರೆ.

ಯಾವ ಪಕ್ಷ ಅಧಿಕಾರದಲ್ಲಿ ಇದ್ದರೇನೂ ತನ್ನ ಮಾತೇ ಅಂತಿಮ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದಾರೆ. ಕಾಂಗ್ರೆಸ್‌ ಮುಖಂಡರು ಎಲ್ಲವನ್ನೂ ನೋಡುತ್ತ ಅಸಹಾಯಕರಾಗಿ ಕುಳಿತಿದ್ದಾರೆ.

ಈಗಾಗಲೇ ನಾಯಕ, ಲಿಂಗಾಯತ, ಮುಸ್ಲಿಂ ಸಮುದಾಯದವರು ಅಧ್ಯಕ್ಷ ರಾಗಿರುವುದರಿಂದ ಈ ಬಾರಿ ಕುರುಬ ಸಮುದಾಯದ ವ್ಯಕ್ತಿಯನ್ನು ಅಧ್ಯಕ್ಷರಾಗಿ ಮಾಡಬೇಕು ಎಂದು ಶಾಸಕರು ನಿರ್ಧರಿ ಸಿದ್ದರು. ಜಾತಿ ಸಮೀಕರಣ ಇದರ ಹಿಂದಿನ ಉದ್ದೇಶ. ಕುರುಬ ಸಮುದಾಯದ ಸದಸ್ಯರಾದ ಚಿದಾನಂದಪ್ಪ, ನಾಗಲಕ್ಷ್ಮ್ಮಮ್ಮ ಹಾಗೂ ರಾಮಚಂದ್ರ ಗೌಡ ಅವರು ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು.

ADVERTISEMENT

ಆದರೆ, ಅಂತಿಮ ವಾಗಿ ನಾಗಲಕ್ಷ್ಮ್ಮಮ್ಮ ಅವರನ್ನು ಅಧ್ಯಕ್ಷೆ ಯಾಗಿ ಮಾಡಲಾಗಿದೆ. ರಾಮಚಂದ್ರ ಗೌಡ ಅವರೇ ಮುಂದಿನ ಅಧ್ಯಕ್ಷರು ಎಂಬ ಮಾತು ಕೇಳಿ ಬಂದಿದ್ದವು. ಆದರೆ, ನಾಮಪತ್ರ ಸಲ್ಲಿಸಲು ಐದು ನಿಮಿಷಗಳಿದ್ದಾಗ ನಾಗಲಕ್ಷ್ಮ್ಮಮ್ಮ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇದರಿಂದ ಕಕ್ಕಾಬಿಕ್ಕಿಯಾದ ರಾಮ ಚಂದ್ರಗೌಡ ನಗರಸಭೆ ಕಚೇರಿಯಲ್ಲಿಯೇ ಆಕ್ರೋಷ ಹೊರಹಾಕಿದರು. ಅವರ ಬೆಂಬಲಿಗರು ನಗರಸಭೆ ಕಚೇರಿ ಎದುರು ಜಮಾಯಿಸಿ ಶಾಸಕರು, ಕಾಂಗ್ರೆಸ್‌ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದರು.

‘27ನೇ ವಾರ್ಡ್‌ ಸದಸ್ಯ ಚಿದಾ ನಂದಪ್ಪ ಐದು ಸಲ ಗೆದ್ದವರು. ಹಿರಿಯ ಸದಸ್ಯರು. ಆದರೆ, ಮುಂಗೋಪಿ. 18ನೇ ವಾರ್ಡ್‌ ಸದಸ್ಯ ರಾಮಚಂದ್ರಗೌಡ ಪಕ್ಷೇತರರಾಗಿ ಗೆದ್ದು, ನಂತರ ಕಾಂಗ್ರೆಸ್‌ ಸೇರಿದವರು. ಅನ್ಯ ಪಕ್ಷದಿಂದ ಬಂದವ ರಿಗೆ ಮಣೆ ಹಾಕಿದರೆ ತಪ್ಪು ಸಂದೇಶ ಹೋಗುತ್ತದೆ ಎನ್ನುವ ಕಾರಣಕ್ಕೆ ನಾಗ ಲಕ್ಷ್ಮಮ್ಮ ಅವರನ್ನು ಅಧ್ಯಕ್ಷೆಯಾಗಿ ಮಾಡಲು ಶಾಸಕರು ತೀರ್ಮಾನ ಕೈಗೊಂಡರು’ ಎಂದು ಹೆಸರು ಹೇಳಲಿಚ್ಛಿ ಸದ ಸದಸ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಸಭೆಯಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದರೂ ಎಲ್ಲ ನಿರ್ಧಾರ ಶಾಸಕರೇ ತೆಗೆದುಕೊಳ್ಳುತ್ತಾರೆ. ನಾಲ್ಕು ವರ್ಷಗಳಲ್ಲಿ ಎಲ್ಲರೂ ಇದನ್ನು ನೋಡುತ್ತ ಬಂದಿದ್ದಾರೆ. ಆದರೆ, ನಮ್ಮ ಕಾಂಗ್ರೆಸ್‌ ಮುಖಂಡರಿಗೆ ಧೈರ್ಯವಿಲ್ಲ. ಎಲ್ಲರೂ ಷಂಡರಂತೆ ಕುಳಿತಿದ್ದಾರೆ. ಅದರ ಲಾಭ ಶಾಸಕರು ಪಡೆದುಕೊಳ್ಳು ತ್ತಿದ್ದಾರೆ’ ಎಂದು ಬೇಸರ ತೋಡಿ ಕೊಂಡರು.
ಆದರೆ, ಈ ಬಾರಿಯ ಚುನಾವಣೆ ಯಲ್ಲಿ ಅಧ್ಯಕ್ಷ ಸ್ಥಾನ ಕೈ ತಪ್ಪಿರುವುದಕ್ಕೆ ಕೆಲ ಸದಸ್ಯರು ಬಹಿರಂಗವಾಗಿಯೇ ಶಾಸ ಕರ ವಿರುದ್ಧ ತೊಡೆ ತಟ್ಟಿದ್ದಾರೆ. ಕೆಲವರು ನೇರವಾಗಿ ಮಾಧ್ಯಮಗಳ ಎದುರೇ ಹರಿಹಾಯ್ದರೆ, ಇನ್ನು ಕೆಲವರು ತಮ್ಮ ಹೆಸರನ್ನು ಹೇಳಲಿಚ್ಛಿಸದೇ ಅಸಮಾ ಧಾನ ಹೊರ ಹಾಕಿದ್ದಾರೆ.

ಶಾಸಕರು ಮೊದಲ ಸಲ ಕಣ್ಣಿ ಉಮಾದೇವಿ, ಎರಡನೇ ಅವಧಿಗೆ ರೋಹಿಣಿ ವೆಂಕಟೇಶ್‌ ಅವರನ್ನು ಅಧ್ಯಕ್ಷೆ ಯಾಗಿ ಮಾಡಿದ್ದಾಗ ಯಾವುದೇ ಅಪ ಸ್ವರ ಕೇಳಿ ಬಂದಿರಲಿಲ್ಲ. ಆದರೆ, ಮೂರನೇ ಅವಧಿಗೆ ಅಬ್ದುಲ್‌ ಖದೀರ್‌ ಅವರನ್ನು ಅಧ್ಯಕ್ಷರಾಗಿ ಮಾಡಿದ್ದಕ್ಕೆ ಸದಸ್ಯ ಎಂ.ಎಸ್‌.ರಘು ಅವರು ಬಹಿರಂಗವಾಗಿಯೇ ಶಾಸಕರ ವಿರುದ್ಧ ಮಾತನಾಡಿದ್ದರು.

ಈಗಲೂ ಅವರು ಶಾಸಕರ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಾರಿ ಅತೃಪ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಿಗೆ ಇದು ಮುಳುವಾದರೂ ಅಚ್ಚರಿ ಪಡಬೇಕಿಲ್ಲ. ಇನ್ನೊಂದೆಡೆ ಈ ವಿಷಯವೇ ಕಾಂಗ್ರೆಸ್‌ಗೆ ಶಕ್ತಿ ತುಂಬಬಹುದು.

ಇಬ್ಬರೂ ಈ ಸಂದರ್ಭವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲವೂ ನಿರ್ಧಾರ ವಾಗಲಿದೆ. ಇನ್ನುಳಿದ ಹತ್ತು ತಿಂಗಳ ಬಳಿಕ ನಗರಸಭೆಗೆ ಚುನಾವಣೆಯ ನಡೆ ಯಬೇಕಿದೆ. ಅದಕ್ಕೂ ಮೊದಲು ವಿಧಾನ ಸಭೆ ಚುನಾವಣೆ ನಡೆಯಲಿದೆ. ಒಟ್ಟಾರೆ ಈ ಎಲ್ಲ ಬೆಳವಣಿಗೆಗಳಿಂದ ಯಾರಿಗೆ ಲಾಭವಾಗುತ್ತದೆ ಕಾದು ನೋಡಬೇಕು.

ಅಧ್ಯಕ್ಷೆಯಾಗಿ ನಾಗಲಕ್ಷ್ಮ್ಮಮ್ಮ ಆಯ್ಕೆ
ನಗರದ ಮೂರನೇ ವಾರ್ಡ್‌ ಸದಸ್ಯೆ (ಪಟೇಲ್‌ ನಗರ) ಕೆ. ನಾಗಲಕ್ಷ್ಮಮ್ಮ ಅವರು ನಗರಸಭೆ ನೂತನ ಅಧ್ಯಕ್ಷೆಯಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ನಾಗಲಕ್ಷ್ಮಮ್ಮ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಅವರು ಯಾವುದೇ ಸ್ಪರ್ಧೆಯಿಲ್ಲದೇ ಆಯ್ಕೆಗೊಂಡರು. ಕಳೆದ ಚುನಾವಣೆಯಲ್ಲಿ ಮೊದಲ ಸಲ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಾಗಲಕ್ಷ್ಮಮ್ಮ ಅವರಿಗೆ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಅವರು ಕುರುಬ ಸಮುದಾಯಕ್ಕೆ ಸೇರಿದವರು.

‘ಇನ್ನುಳಿದ ಹತ್ತು ತಿಂಗಳ ಅವಧಿಯಲ್ಲಿ ನಗರದಲ್ಲಿ ಸಮರ್ಪಕ ವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಆದ್ಯತೆಯ ಮೇರೆಗೆ ಕೆಲಸ ಮಾಡುತ್ತೇನೆ. ಸೂರಿಲ್ಲದವರಿಗೆ ಸೂರು ಕಲ್ಪಿಸಲು ಶ್ರಮಿಸುತ್ತೇನೆ’ ಎಂದು ನಾಗಲಕ್ಷ್ಮಮ್ಮ ತಿಳಿಸಿದರು.

* * 

ಬೇರೆ ಪಕ್ಷದ ಮುಖಂಡರು ನಮ್ಮ ಪಕ್ಷದ ವ್ಯವಹಾರಗಳಲ್ಲಿ ಮೂಗು ತೂರಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಅಂತಹವರಿಗೆ ಜನರೇ ಪಾಠ ಕಲಿಸುತ್ತಾರೆ
ದೀಪಕ್‌ ಸಿಂಗ್‌
ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.