ADVERTISEMENT

ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿಗೆ ಸಿದ್ಧತೆ

ಇದೇ 19ರಿಂದ ಟೂರ್ನಿ ಆರಂಭ, 400ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆ

ಕೆ.ನರಸಿಂಹ ಮೂರ್ತಿ
Published 13 ಜುಲೈ 2017, 11:26 IST
Last Updated 13 ಜುಲೈ 2017, 11:26 IST

ಬಳ್ಳಾರಿ:  ಕಬಡ್ಡಿ ಮತ್ತು ಹಾಕಿ ಕ್ರೀಡಾಪಟುಗಳಿಂದ ರಾಜ್ಯದ ಗಮನ ಸೆಳೆದಿರುವ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿ ಜುಲೈ 19ರಿಂದ ನಡೆಯಲಿದ್ದು, ನಗರದ ಕ್ರೀಡಾ ಸಮುಚ್ಛಯ ಮತ್ತು ಪೊಲೀಸ್‌ ಜಿಮ್‌ಖಾನಾದಲ್ಲಿ ಸಿದ್ಧತೆಗಳು ಭರದಿಂದ ನಡೆದಿವೆ.

ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಟೂರ್ನಿ ಆಯೋಜಿಸಿದ್ದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ವನ್ನು ಪ್ರತಿನಿಧಿಸಿರುವ 400ಕ್ಕೂ ಹೆಚ್ಚು ಉನ್ನತ ಶ್ರೇಣಿಯ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಅತಿಥೇಯ ಸ್ಥಾನದಲ್ಲಿರುವ ಜಿಲ್ಲೆಯು ರಾಜ್ಯದ ವಿವಿಧ ಭಾಗಗಳಿಂದ ಬರಲಿರುವ ಕ್ರೀಡಾಪಟುಗಳ ಸ್ವಾಗತಕ್ಕೆ ಸಜ್ಜಾಗಿದೆ.

19 ವರ್ಷ ವಯಸ್ಸಿನೊಳಗಿನ ಬಾಲಕ–ಬಾಲಕಿಯರ ವಿಭಾಗ, ಮಹಿಳೆಯರು ಮತ್ತು ಪುರುಷರ ಮುಕ್ತ ಪಂದ್ಯಾವಳಿ ಮತ್ತು ಹಿರಿಯರ ವಿಭಾಗ ಸೇರಿದಂತೆ ಒಟ್ಟು 12 ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.

ADVERTISEMENT

ಎರಡು ಸ್ಥಳ: ನಗರದಲ್ಲಿ ಸದ್ಯ ಎರಡು ಬ್ಯಾಡ್ಮಿಂಟನ್‌ ಅಂಕಣಗಳಿವೆ.  ಕ್ರೀಡಾ ಸಮುಚ್ಛಯದ ಆವರಣ ಮತ್ತು ಪೊಲೀಸ್‌ ಜಿಮ್‌ಖಾನಾದಲ್ಲಿರುವ ಅಂಕಣಗಳಲ್ಲಿ ಬಾಲಕ–ಬಾಲಕಿಯರು, ಪುರುಷ–ಮಹಿಳೆಯರು ಅಭ್ಯಾಸ ನಡೆಸುತ್ತಿದ್ದಾರೆ, ಆದರೆ ಇದುವರೆಗೆ ಇಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆದಿರಲಿಲ್ಲ. ಈಗ ನಡೆಯುತ್ತಿರುವುದರಿಂದ ಅಭ್ಯಾಸಿ ಗಳಲ್ಲೂ ಕುತೂಹಲ ಮೂಡಿದೆ.

ಜನಪ್ರಿಯ: ಇಡೀ ವಿಶ್ವದಲ್ಲಿ ಫುಟ್‌ಬಾಲ್‌ ಹೊರತುಪಡಿಸಿದರೆ ಬ್ಯಾಡ್ಮಿಂಟನ್‌ ಅತ್ಯಂತ ಜನಪ್ರಿಯವಾದ ಎರಡನೇ ಆಟ. ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಪರಿಶ್ರಮ ತೋರಿ ರುವ ಕ್ರೀಡಾಪಟುಗಳೂ ಜಿಲ್ಲೆಯಲ್ಲಿ ದ್ದಾರೆ. ಈಗ ಇಲ್ಲಿಯೇ ರಾಜ್ಯಮಟ್ಟದ ಪಂದ್ಯಾವಳಿ ಏರ್ಪಾಡಾಗುತ್ತಿರುವುದು, ಯುವ ಸಮುದಾಯದಲ್ಲಿ ಈ ಕ್ರೀಡೆಯ ಬಗ್ಗೆ ಆಸಕ್ತಿಯನ್ನು ಮೂಡಿಸಲು ಸಹಾಯಕವಾಗಲಿದೆ ಎನ್ನುತ್ತಾರೆ ಕ್ರೀಡಾ ಸಮುಚ್ಛಯದ ಬ್ಯಾಡ್ಮಿಂಟನ್ ತರಬೇತುದಾರ ವೀರೇಶ್‌.

ಪೈಪೋಟಿ ನೋಡಲು ಬನ್ನಿ: ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಎರಡು ವರ್ಷದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಪ್ರೋತ್ಸಾಹಿಸಲು ಮಕ್ಕಳಿಗೆ ತರಬೇತಿ ನೀಡುತ್ತಿದೆ. ಪಂದ್ಯಾವಳಿಗಳನ್ನು ಆಯೋಜಿಸುತ್ತಿದೆ. ಕ್ರೀಡಾಸಕ್ತರು ಮತ್ತು ಅಭಿಮಾನಿಗಳು ಉನ್ನತ ಶ್ರೇಣಿಯ ಬ್ಯಾಡ್ಮಿಂಟನ್ ಆಟಗಾರರ ಆಟಗಳನ್ನು ವೀಕ್ಷಿಸಬೇಕು ಎಂದು ಅಸೋಸಿಯೇಶನ್‌ ಸಂಚಾಲಕ ಡಾ.ನಾರಾಯಣಾಚಾರ್ಯ ಮನವಿ ಮಾಡಿದ್ದಾರೆ.

***

ಸಂಪರ್ಕ ರಸ್ತೆ ಅಭಿವೃದ್ಧಿಯಾಗುವುದೇ?

ಟೂರ್ನಿ ಆಯೋಜನೆ ಗೊಂಡಿರುವ ಕಾರಣದಿಂದ ಆದರೂ ಕ್ರೀಡಾ ಸಮುಚ್ಛಯದ ಸಂಪರ್ಕ ರಸ್ತೆಗಳ ಅಭಿವೃದ್ಧಿ ನಡೆಯಬೇಕು ಎಂಬುದು ಕ್ರೀಡಾಪ್ರೇಮಿಗಳ ಒತ್ತಾಸೆ. 

ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಣ್ಣಿನಿಂದ ಕೂಡಿದೆ. ಜಿಲ್ಲಾ ಕ್ರೀಡಾಂಗಣ ಮತ್ತು ಕ್ರೀಡಾ ಸಮುಚ್ಛಯ ಎರಡೂ ಕಡೆಗೆ ತೆರಳುವವರು ಮಣ್ಣಿನ ರಸ್ತೆಯನ್ನೇ ಅವಲಂಬಿಸಿದ್ದಾರೆ. ರಸ್ತೆ ಅಭಿವೃದ್ಧಿ ಸಲುವಾಗಿ ಜಿಲ್ಲಾಡಳಿತವು ಇತ್ತೀಚೆಗೆ ಪಾಲಿಕೆಗೆ ಸೂಚನೆ ನೀಡಿದೆ. ಆದರೆ ಪಾಲಿಕೆ ಅಭಿವೃದ್ಧಿ ಕುರಿತು ಅಗತ್ಯ ಕಾಳಜಿ ವಹಿಸಿಲ್ಲ ಎನ್ನುತ್ತವೆ ಇಲಾಖೆಯ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.