ಕೂಡ್ಲಿಗಿ: ತಾಲ್ಲೂಕಿನ ಪ್ರಸಿದ್ಧ ಮೊರಬದ ವೀರಭದ್ರೇಶ್ವರ ರಥೋತ್ಸವವು ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಸಂಜೆ ರಥೋತ್ಸವಕ್ಕೂ ಮೊದಲು ಸಮಾಳ, ನಂದಿಕೋಲು, ಉರಿಮೆ ಮುಂತಾದ ಸಕಲ ವಾದ್ಯಗಳೊಂದಿಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ತರಲಾಯಿತು.
ನಂತರ ರಥಕ್ಕೆ 3 ಬಾರಿ ಪ್ರದಕ್ಷಿಣೆ ಹಾಕಿದ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನೆರೆದ ಭಕ್ತಸಮೂಹ ಸ್ವಾಮಿಗೆ ಜಯವಾಗಲಿ ಎಂದು ಜಯಘೋಷ ಕೂಗುತ್ತ ರಥವನ್ನು ಎಳೆದರು. ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿಗಳನ್ನು ತೂರಿ ತಮ್ಮ ಭಕ್ತಿಭಾವವನ್ನು ಮೆರೆದರು. ವಿವಿಧ ಬಣ್ಣದ ಬಟ್ಟೆ, ಧ್ವಜ, ಹೂವಿನ ಹಾರಗಳಿಂದ ಸ್ವಾಮಿಯ ರಥವನ್ನು ಅಲಂಕೃತಗೊಳಿಸಲಾಗಿತ್ತು.
ಇದೇ ಸಂದರ್ಭದಲ್ಲಿ ನೆರೆದ ಸಾವಿರಾರು ಭಕ್ತರ ಮಧ್ಯೆ ಸ್ವಾಮಿಯ ಪಟವನ್ನು ಹರಾಜು ಮಾಡಲಾಯಿತು. ಈ ಬಾರಿ ಸ್ವಾಮಿಯ ಪಟವನ್ನು ತೌಡೂರು ತಿಪ್ಪೇಸ್ವಾಮಿ ₹ 2,10,101 ಖರೀದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.