ಬಳ್ಳಾರಿ: ‘ಆರ್ಯವೈಶ್ಯ ಸಮಾಜದವರು ವ್ಯಾಪಾರ ವೃತ್ತಿಯೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಆದ್ಯತೆ ನೀಡಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸಲಹೆ ನೀಡಿದರು. ನಗರದ ಕಮ್ಮ ಭವನದಲ್ಲಿ ಭಾನುವಾರ ಆರ್ಯ ವೈಶ್ಯ ಅಸೋಸಿಯೇಶನ್ ಏರ್ಪಡಿಸಿದ್ದ ಜಿಲ್ಲಾ ಆರ್ಯವೈಶ್ಯ ಸಮ್ಮೇಳನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೊದಲು ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಬದಲಾದ ಪರಿಸ್ಥಿತಿ ಮತ್ತು ಸ್ಪರ್ಧಾತ್ನಕ ಮನೋಭಾವ ಬೆಳೆಸಿಕೊಂಡಿ ರುವುದರಿಮದ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಈ ಧೋರಣೆ ಎಲ್ಲರಲ್ಲೂ ಬರಬೇಕು’ ಎಂದರು.
‘ಹಿಂದಿನ ವರ್ಷ ದಾವಣಗೆರೆಯಲ್ಲಿ ನಡೆದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ್ದ 840 ಮಕ್ಕಳು ಭಾಗವಹಿಸಿದ್ದರು. ಅವರಲ್ಲಿ 148 ವಿದ್ಯಾರ್ಥಿಗಳು ಶೇ. 100 ರಷ್ಟು ಅಂಕಗಳಿಸಿದವರಾಗಿದ್ದರು. ಹೀಗೆ ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ಅನಿವಾರ್ಯತೆ ಇದೆ. ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯವಿದೆ’ ಎಂದರು.
‘ಎಲ್ಲ ರೀತಿಯ ದಾನಧರ್ಮ ಮಾಡುವುದರಲ್ಲಿ ಮುಂದಿರುವ ಸಮಾಜದ ಗಣ್ಯರು ನಿರ್ಧರಿಸಿ ದಾನ, ದತ್ತಿಗಳನ್ನು ಸಂಗ್ರಹಿಸಿ, ತಮ್ಮ ಕೊಡುಗೆಯನ್ನೂ ನೀಡಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ಸಮುದಾಯದ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು’ ಎಂದರು. ಆರ್ಯವೈಶ್ಯ ಸಮಾಜದ ಜಯಪ್ರಕಾಶ ಜೆ. ಗುಪ್ತ ಮಾತನಾಡಿದರು.
ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಪಾಠೋಪಕರಣಗಳನ್ನು ಗಣ್ಯರು ವಿತರಿಸಿದರು. ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಸಂಘದ ಅಭಿವೃದ್ಧಿಗೆ ಧನ ಸಹಾಯ ಮಾಡಿದವರನ್ನು ಸನ್ಮಾನಿಸಿದರು. ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿ ಶಂಕರ್, ಆರ್ಯವೈಶ್ಯ ಅಸೋಶಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಡಿ.ಎಲ್. ರಮೇಶ್ ಗೋಪಾಲ್, ಮುಖಂಡರಾದ ನಾಮ ನಾಗರಾಜ್, ಸೋಂತ ಗಿರಿಧರ್, ವಿಟ್ಟ ವೆಂಕಟೇಶ್, ಮುತ್ಯಾಲ ರಮೇಶ್ ಬಾಬು, ನಾಮ ರಮೇಶ್ ಮತ್ತು
ಕೆ.ಎನ್. ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.