ADVERTISEMENT

‘ಸಮುದಾಯದ ಬಡವರಿಗೆ ಮೀಸಲಾತಿ ಕೋರಿಕೆ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 5:45 IST
Last Updated 13 ನವೆಂಬರ್ 2017, 5:45 IST

ಬಳ್ಳಾರಿ: ‘ರೆಡ್ಡಿ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಗೃಹ ಸಚಿವ ಎ.ರಾಮಲಿಂಗಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ವೇಣಿವೀರಾಪುರದಲ್ಲಿ ಮಹಾಯೋಗಿ ವೇಮನಪೀಠವು ಭಾನುವಾರ ಏರ್ಪಡಿಸಿದ್ದ ರೆಡ್ಡಿ ಸಮುದಾಯದ ಕಾರ್ತಿಕ ವನಭೋಜನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮುದಾಯದ ಬಡವರ ಮಕ್ಕಳಿಗಾಗಿ ಪೀಠದ ನೇತೃತ್ವದಲ್ಲಿ ಅನುಕೂಲಗಳನ್ನು ಕಲ್ಪಿಸಬೇಕು.ಬಾಲಕಿಯರ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಕಲಬುರ್ಗಿ ಮತ್ತು ರಾಯಚೂರಿನಲ್ಲಿ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮನವರ ಅಧ್ಯಯನ ಪೀಠವನ್ನು ಸ್ಥಾಪಿಸಲು ಸರ್ಕಾರ ಹಣ ಬಿಡುಗಡೆ ಮಾಡಿದೆ. ಅದೇ ರೀತಿ,
ರಾಜ್ಯದಲ್ಲಿ ಯಾವುದಾದರೂ ವಿಶ್ವವಿದ್ಯಾಲಯಕ್ಕೇ ವೇಮನರ ಹೆಸರಿಡಬೇಕು ಎಂಬ ಮನವಿಗೂ ಸರ್ಕಾರ ಸ್ಪಂದಿಸುವ ನಿರೀಕ್ಷೆ ಇದೆ’ ಎಂದರು.

ADVERTISEMENT

ಕೆ.ಸಿ.ರೆಡ್ಡಿ ಪುತ್ಥಳಿ:‘ವಿಧಾನಸೌಧನಕ್ಕೆ ಅಡಿಗಲ್ಲು ಹಾಕಿದ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ವಿಧಾನಸೌಧದಲ್ಲಿ ಸ್ಥಾಪಿಸಬೇಕು ಎಂದ ಅವರ ಕುಟುಂಬ ಆಗ್ರಹಿಸಿದೆ. ಅ ಬಗ್ಗೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರೊಂದಿಗೆ ಚರ್ಚೆ ನಡೆದಿದ್ದು, ಶೀಘ್ರ ಪುತ್ಥಳಿ ಸ್ಥಾಪನೆಯಾಗಲಿದೆ’ ಎಂದರು.

ಸಂಘಟಿತರಲ್ಲೇ ಹಿಂದುಳಿದವರು: ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರರೆಡ್ಡಿ, ‘ರೆಡ್ಡಿ ಸಮುದಾಯದವರು ಸಂಘಟಿತ ಸಮುದಾಯಗಳ ಪೈಕಿ ಹಿಂದುಳಿದವರು. ಈ ಸಮುದಾಯದಲ್ಲಿ ಎಲ್ಲರೂ ಅನುಕೂಲಸ್ಥರು ಎಂಬ ನಂಬಿಕೆ ಜನರಲ್ಲಿದೆ. ಆದರೆ ಅನುಕೂಲಸ್ಥರಲ್ಲದವರೂ ಸಮು\ದಾಯದಲ್ಲಿcದ್ದಾರೆ. ಅವರ ಏಳ್ಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ ಮಾತನಾಡಿದರು. ವೇಮನಾನಂದ ಸ್ವಾಮಿ ಸಾನಿಧ್ಯ ವಹಿಸಿದ್ದರು. ರೆಡ್ಡಿ ಜನಸಂಘದ ಅಧ್ಯಕ್ಷ ಎಚ್‌.ಎನ್‌.ವಿಜಯರಾಘವರೆಡ್ಡಿ, ಉಪಾಧ್ಯಕ್ಷ ಮುನಿವೆಂಕಟ ರೆಡ್ಡಿ, ನಾ.ರ.ಪ್ರತಾಪ ರೆಡ್ಡಿ, ಅಯ್ಯನಾಥ ರೆಡ್ಡಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮಕ್ಕೂ ಮುನ್ನ, ಮಣ್ಣಿನ ಸಂರಕ್ಷಣೆ ಮತ್ತು ಅರಣ್ಯ ಕೃಷಿಯಿಂದ ಬದುಗಳಲ್ಲಿ ಆದಾಯ ಗಳಿಸುವ ಕುರಿತು ಕೆ.ಆರ್‌.ಹುಲುನಾಚೇಗೌಡ ವಿಶೇಷ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.