ಹೊಸಪೇಟೆ: ರಾಜ್ಯ ಬಜೆಟ್ನಲ್ಲಿ ಆರ್ಯವೈಶ್ಯ ಅಭಿವೃದ್ಧಿ ನಿಗಮ ಘೋಷಿಸಿರುವುದಕ್ಕೆ ಆರ್ಯವೈಶ್ಯ ಸಂಘದಿಂದ ಗುರುವಾರ ಸಂಜೆ ನಗರದ ರೋಟರಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಸಂಘದ ಪದಾಧಿಕಾರಿಗಳು ವೃತ್ತದಲ್ಲಿ ಸೇರಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ನಿಗಮ ರಚನೆಗೆ ಕಾರಣೀಕರ್ತರಾದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ಶರವಣ ಪರ ಜಯಘೋಷ ಹಾಕಿದರು.
ಆರ್ಯವೈಶ್ಯ ಸಂಘದ ನಗರ ಘಟಕದ ಅಧ್ಯಕ್ಷ ಭೂಪಾಳ್ ರಾಘವೇಂದ್ರ ಶೆಟ್ಟಿ ಮಾತನಾಡಿ, ‘ಸಮಾಜಕ್ಕೆ ಪ್ರತ್ಯೇಕ ನಿಗಮ ರಚಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗಳನ್ನು ಕುಮಾರಸ್ವಾಮಿ ಅವರು ಈಡೇರಿಸಿದ್ದಾರೆ. ಅದಕ್ಕಾಗಿ ಟಿ.ಎ. ಶರವಣ ಅವರು ಸಾಕಷ್ಟು ಬೆವರು ಹರಿಸಿದ್ದಾರೆ. ಈ ಇಬ್ಬರೂ ನಾಯಕರಿಗೆ ಸಮಾಜ ಋಣಿ ಆಗಿರುತ್ತದೆ’ ಎಂದು ಹೇಳಿದರು.
ಮಹಾಮಂಡಳಿ ಸರ್ಕಾರಿ ಸವಲತ್ತುಗಳ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗುಪ್ತಾ, ಜಿಲ್ಲಾ ಅಧ್ಯಕ್ಷ ಸಿ. ಕುಮಾರಸ್ವಾಮಿ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ, ನಗರ ಘಟಕದ ಅಧ್ಯಕ್ಷ ಜಿ. ಸಂಜೀವಶೆಟ್ಟಿ, ಯುವಜನ ಸಂಘದ ಅಧ್ಯಕ್ಷ ಜನಾದ್ರಿ ವೆಂಕಣ್ಣ ಶೆಟ್ಟಿ, ಕಾರ್ಯದರ್ಶಿ ಪೆಂಡಕೂರು ಶ್ರೀನಿವಾಸ ಶೆಟ್ಟಿ, ಖಜಾಂಚಿ ನರೇಗಲ್ ನೀಲಕಂಠ ಶೆಟ್ಟಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.