ಹೊಸಪೇಟೆ: ತಾಲ್ಲೂಕಿನ ಹಿಪ್ಪಿತೇರಿ ಮಾಗಾಣಿಯಲ್ಲಿ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಗದ್ದುಗೆಯ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 26, 27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
26ರಂದು ಬೆಳಿಗ್ಗೆ 9ಕ್ಕೆ ಮಂಡಾಳರಾಶಿ ತರಲಾಗುತ್ತದೆ. ಚಿತ್ತವಾಡ್ಗಿ ತಿರುಮಲ ನಗರದ ಮಲ್ಲಿಕಾರ್ಜುನಗೌಡರ ನಿವಾಸದಿಂದ ಸುಮಂಗಲಿಯರು ಎಸ್.ಎಂ. ಚಂದ್ರಯ್ಯ ಸ್ವಾಮೀಜಿ ನೇತೃತ್ವದಲ್ಲಿ ವೀರಗಾಸೆ ಜತೆಯಲ್ಲಿ ಕಲಶ ಹೊತ್ತು ಹೆಜ್ಜೆ ಹಾಕುವರು. ಸಂಜೆ 5ಕ್ಕೆ ನಡೆಯಲಿರುವ ಶಿವಾನುಭವ ಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯವನ್ನು ಕೊಪ್ಪಳದ ನಗರಗಡ್ಡಿ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ, ಮೈನಳ್ಳಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಮಾತಾ ಅನುರಾಧೇಶ್ವರಿ ಅಧ್ಯಕ್ಷತೆ ವಹಿಸುವರು.
ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಡಾ. ಸೋಮೇಶ್ವರ ಗಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ ಅತಿಥಿಗಳಾಗಿ ಪಾಲ್ಗೊಳ್ಳುವರು. ರಾತ್ರಿ 10ಕ್ಕೆ ಬಸವನದುರ್ಗ ಹಾಗೂ ಚಿತ್ತವಾಡ್ಗಿ ಭಜನಾ ಮಂಡಳಿಗಳು ಭಜನೆ ಕಾರ್ಯಕ್ರಮ ನಡೆಸಿಕೊಡಲಿವೆ.
27ರಂದು ಬೆಳಿಗ್ಗೆ 4ಕ್ಕೆ ಬಸಯ್ಯ ಶಾಸ್ತ್ರಿಗಳು ಕರಿಬಸವೇಶ್ವರ ಸ್ವಾಮಿ ಗದ್ದುಗೆಗೆ ಮಹಾರುದ್ರಾಭಿಷೇಕ ನೆರವೇರಿಸುವರು. 6ಕ್ಕೆ ಗಂಗೆ ಪೂಜೆ ಮಾಡುವರು. ಬಳಿಕ ವೀರಗಾಸೆ, ನಂದಿಕೋಲು, ಸಮಾಳ ಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸುತ್ತಾರೆ. ನಂತರ ಅಗ್ನಿ ಪ್ರವೇಶ, ಮಹಾಮಂಗಳಾರತಿ, ದಾಸೋಹ ವ್ಯವಸ್ಥೆ ನಡೆಯಲಿದೆ ಎಂದು ದೇಗುಲ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.