ದೇವನಹಳ್ಳಿ: ತಾಲ್ಲೂಕಿನ ಐತಿಹಾಸಿಕ ಚಪ್ಪರದಕಲ್ಲು ಬಳಿ ಇಂದು (ನ.10) ನಡೆಯಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶರಣಯ್ಯ ಹಿರೇಮಠ ಅವರನ್ನು ಅಲಂಕೃತ ತೆರೆದ ವಾಹನದಲ್ಲಿ ಮೆರವಣೆಗೆ ಮೂಲಕ ವೇದಿಕೆಗೆ ಕರೆತರಲಾಗುತ್ತದೆ.
ತಾಲ್ಲೂಕಿನ ವಿಶ್ವನಾಥಪುರ ಸರ್ಕಾರಿ ಕಿರಿಯ ಕಾಲೇಜು ಆವರಣದಿಂದ ಹೊರಡುವ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವೇಶ ಭೂಷಣಗಳೊಂದಿಗೆ ಎನ್.ಸಿ.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳದ ಘಟಕದ ವಿದ್ಯಾರ್ಥಿಗಳು, ಸಾಹಿತಿಗಳು, ಕವಿಗಳು, ಸಾಂಪ್ರದಾಯಿಕ ಪೂರ್ಣಕುಂಭ ಹೊತ್ತ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವರಲ್ಲಿ ಒಬ್ಬರಾದ ಎಚ್.ಎಂ.ರವಿಕುಮಾರ್ ಮಾಹಿತಿ ನೀಡಿದರು.
ಬೆಳಿಗ್ಗೆ 8.30ಕ್ಕೆ ತಹಶೀಲ್ದಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಕನ್ನಡ ಪರಿಷತ್ತಿನ ಧ್ವಜವನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಅಧ್ಯಕ್ಷ ರಮೇಶ್ ಮತ್ತು ಕನ್ನಡ ನಾಡ ಧ್ವಜಾರೋಹಣವನ್ನು ಹಿರಿಯ ಮುಖಂಡ ರಾಮನಾಥಪುರ ಗ್ರಾಮದ ಬಿ.ಚಂದ್ರಯ್ಯ ನೆರವೇರಿಸಲಿದ್ದಾರೆ.
ನಂತರ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಗುತ್ತದೆ. ನಂತರ ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ತಾಲ್ಲೂಕಿನ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಸದ ಎಂ.ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದು, ಶಾಸಕ ಪಿಳ್ಳಮುನಿಶಾಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ನಡೆಯುವ ವಿಚಾರಗೋಷ್ಠಿಯಲ್ಲಿ ಕಲಾವಿದ ಡಾ.ದೇವನಹಳ್ಳಿ ದೇವರಾಜ್, ವಿಚಾರವಾದಿ ಕಾರಹಳ್ಳಿ ಶ್ರೀನಿವಾಸ್, ಹೋರಾಟಗಾರ ಕಲ್ಯಾಣ ಕುಮಾರ್ ರಿಂದ ಸಾಹಿತ್ಯಕ್ಕೆ ರಂಗಭೂಮಿ ಕೊಡುಗೆ, ಪಂಚಾಯತ್ ರಾಜ್ಯದ ವ್ಯವಸ್ಥೆ ಅಂದು ಇಂದು ಹಾಗೂ ಶಾಶ್ವತ ನೀರಾವರಿ ಯೋಜನೆ ವಿಷಯ ಚರ್ಚಿತವಾಗಲಿದೆ.
ಮಧ್ಯಾಹ್ನ 2ಕ್ಕೆ ಮಾ.ನ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕವಿಗೊಷ್ಠಿ, ಮಧ್ಯಾಹ್ನ 3.20ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 5ಕ್ಕೆ ವಾಸುದೇವ್ ಹೊಸಳ್ಳಿ ತಂಡದಿಂದ ಹಳ್ಳಿ ಜನಪದ ಗಾಯನ ಕಾರ್ಯಕ್ರಮ ನಂತರ ಡಾ.ಪಿ.ಆಂಜಿನಪ್ಪರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.