ADVERTISEMENT

ಕಸಾಪ ಶತಮಾನೋತ್ಸವಕ್ಕೆ ಸಿದ್ಧತೆ

9,10ರಂದು ದೇವನಹಳ್ಳಿಯಲ್ಲಿ ಆಚರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 9:16 IST
Last Updated 6 ಅಕ್ಟೋಬರ್ 2015, 9:16 IST

ದೇವನಹಳ್ಳಿ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಕ್ಟೋಬರ್ 9 ಮತ್ತು 10 ರಂದು ಪಟ್ಟಣದಲ್ಲಿ ನಡೆಸಲಾಗುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಹಾಗೂ ಕನ್ನಡ ವರ್ಷಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜು ತಿಳಿಸಿದರು.

ಪಟ್ಟಣದ ಮಿನಿವಿಧಾನ ಸೌಧ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಶತಮಾನ ಕಳೆದಿರುವ ಕನ್ನಡ ಸಾಹಿತ್ಯ ಪರಿಷತ್ತು ಸ್ಮರಣಿಯವಾಗಿಸಲು ರಾಜ್ಯ ಸರ್ಕಾರ ಚಾಮರಾಜ ಪೇಟೆಯಲ್ಲಿ ನೂತನ ಭವ್ಯ ಕಟ್ಟಡಕ್ಕೆ ₹30 ಕೋಟಿ  ನೀಡಲಿದೆ. ಅದೇ ರೀತಿ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಕನ್ನಡ ಸಂಸ್ಕೃತಿ ಬೆಳೆದ ಬಂದ ದಾರಿ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಜಿಲ್ಲೆಗೆ ₹6 ಲಕ್ಷ ನೀಡಿದೆ ಎಂದರು.

ದೇವನಹಳ್ಳಿ ಲಕ್ಷ್ಮಿ ವೆಂಕಟೇಶ್ವರ ವೈಭವ ಕಲ್ಯಾಣ ಮಂದಿರದಲ್ಲಿ ನಡೆಯುವ ಎರಡು ದಿನಗಳ ಕಾರ್ಯಕ್ರಮ ಇದಾಗಿದೆ. ಮೊದಲ ದಿನ ಜಿಲ್ಲಾ ಕಸಾಪ ವೆಬ್‌ಸೈಟ್‌ ಉದ್ಘಾಟನೆ, ಜಿಲ್ಲೆಯ ಸಾಹಿತಿಗಳ ನೆನಪಿಗೆ ಸಾಹಿತ್ಯ ಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹತ್ತು ಸಾಧಕರಿಗೆ ಸನ್ಮಾನ, ರೈತರ ಆತ್ಮಹತ್ಯೆ ಬಗ್ಗೆ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರಿಂದ ಚಿಂತನಾ ಗೋಷ್ಠಿ, ಮಹಿಳೆಯರ ದೌರ್ಜನ್ಯ ಕುರಿತು ಸಾಹಿತಿ ಕೆ. ಶರೀಫ್‌ ಅವರಿಂದ ವಿಚಾರ ಸಂಕಿರಣ, ಮಹಿಳೆರಿಗಿರುವ ಸವಾಲುಗಳ ಕುರಿತು ಸಾಹಿತಿ ಬಿ.ಟಿ ಲಲಿತಾ ನಾಯ್ಕ ಅವರಿಂದ ಚಿಂತನ ಮಂಥನ ನಡೆಯಲಿದೆ. ಅಲ್ಲದೆ ಸ್ಥಳೀಯ ಜನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.

ಶಾಸಕ ಪಿಳ್ಳಮುನಿಶಾಪ್ಪ ಮಾತನಾಡಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಸುವ ಅವಕಾಶ ಸಿಕ್ಕರುವುದು ಉತ್ತಮ ಬೆಳವಣಿಗೆ. ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಅನೇಕ ಸಾಹಿತಿಗಳು ಹುಟ್ಟಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಕೊಡುಗೆ ನೀಡಿ ಅಮರರಾಗಿದ್ದಾರೆ. ಕನ್ನಡ ಸಂಸ್ಕತಿಯ ಪ್ರತಿಯೊಂದು ಆಯಾಮಗಳು ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಬೇಕು. ಸರ್ಕಾರ 9,10 ರಂದು ಒಒಡಿ ಸೌಲಭ್ಯ ನೀಡಿರುವುದರಿಂದ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

ಅಂಗನವಾಡಿ ಕಾರ್ಯಕರ್ತೆಯರು ಸ್ವಸಹಾಯ ಗುಂಪುಗಳು ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಲು ಕ್ರಮ ಕೈಗೊಳ್ಳವಂತೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದೆಂದರು. ಶಿರಸ್ತೇದಾರ್ ಅಣ್ಣಪ್ಪ,  ಕ.ಸಾ.ಪ ತಾಲ್ಲೂಕು ಅಧ್ಯಕ್ಷ ರಾಜ್ ಗೊಪಾಲ್, ಗೌರವಾಧ್ಯಕ್ಷ ಗುರುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.