ADVERTISEMENT

ಕಾಮಗಾರಿ: ಪಟ್ಟಿ ಸಿದ್ದಪಡಿಸಲು ಪುರಸಭೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 5:01 IST
Last Updated 13 ಏಪ್ರಿಲ್ 2017, 5:01 IST

ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸರ್ಕಾರದಿಂದ ಬರುವಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಕಡೆಗೆ ಜನರು ಪ್ರಜ್ಞಾವಂತರಾಗಬೇಕು. ಆಗ ಮಾತ್ರ ಯಾವುದೇ ಸಮುದಾಯಗಳಿರಲಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.

ಪಟ್ಟಣದ 22 ನೇ ವಾರ್ಡಿನ ಟಿಪ್ಪುನಗರದಲ್ಲಿರುವ ಮದರಸಾಗೆ ಭೇಟಿ ನೀಡಿದ್ದ ಅವರು, ಇಲ್ಲಿನ ಪರಿಸ್ಥಿತಿಗಳನ್ನು ಅವಲೋಕನ ಮಾಡುವುದರ ಜೊತೆಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.

ಕೋಲಾರ ರಸ್ತೆಯಲ್ಲಿರುವ ಟಿಪ್ಪುನಗರದ ಬಸ್ ತಂಗುದಾಣ ನಿರ್ಮಾಣ ಮಾಡಲಾಗುತ್ತದೆ ಎಂದ ಅವರು, ಪಟ್ಟಣದ 23 ವಾರ್ಡುಗಳಲ್ಲಿನ ಅತಿ ಜರೂರಾಗಿ ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪಟ್ಟಿ ಮಾಡುವಂತೆ ಪುರಸಭಾ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ್ ಅವರಿಗೆ ಸೂಚಿಸಿದರು.

ಈ ಭಾಗದಲ್ಲಿನ ಎಲ್ಲ ಕಬ್ಬಿಣದ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸುವಂತೆ ‘ಬೆಸ್ಕಾಂ’  ಅಧಿಕಾರಿಗಳಿಗೆ ಸೂಚಿಸಿದರು. ವಿಜಯಪುರ ಪಟ್ಟಣದಲ್ಲಿ ಭೂಮಿ ನೀಡಿದರೆ ಶಾದಿಮಹಲ್ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಿಕೊಡಲಾಗುತ್ತದೆ.

ಎಲ್ಲಾ ವರ್ಗದ ಜನಾಂಗಗಳ ಮಕ್ಕಳಿಗೆ ಅನುಕೂಲ ಕಲ್ಪಿಸಲು ಚನ್ನರಾಯಪಟ್ಟಣ ಹೋಬಳಿ ಸೋಮತ್ತನಹಳ್ಳಿಯಲ್ಲಿ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪುರಸಭಾ ಮುಖ್ಯಾಧಿಕಾರಿ ಕೆ.ಜಿ. ಅಮರನಾಥ್, ಬೆಸ್ಕಾಂ ಇಲಾಖೆಯ ಎಂಜಿನಿಯರ್ ಮಂಜುನಾಥ್, ಮುಖಂಡರಾದ ಮಹಬೂಬ್, ಇಲಿಯಾಜ್, ಮೌಲಾ, ಸಬೀರ್, ಆಸಿಫ್, ಮಹಮದ್ ನೂಲ್ ಅಲುಮ್, ಮುನಾವರ್, ಅಬ್ದುಲ್ ರಾಬ್, ಪುರಸಭಾ ಸದಸ್ಯ ಎಸ್.ಬಾಸ್ಕರ್,  ವೀರಭದ್ರಪ್ಪ, ಜೆಡಿಎಸ್ ನಗರ  ಅಧ್ಯಕ್ಷ ನಾರಾಯಣಸ್ವಾಮಿ, ಸುಬ್ಬೇಗೌಡ, ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.