ದೊಡ್ಡಬಳ್ಳಾಪುರ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯನ್ನು ಮಾದರಿ ಮಾರುಕಟ್ಟೆಯಾಗಿ ಅಭಿವೃದ್ಧಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಎಪಿಎಂಸಿ ಉಪಾಧ್ಯಕ್ಷ ಟಿ.ಮಂಜುನಾಥ್ ಹೇಳಿದರು.
ಅವರು ನಗರದ ಎಪಿಎಂಸಿ ಆವರಣದಲ್ಲಿನ ದಿನಸಿ ವರ್ತಕರ ಸಂಘದ ವತಿಯಿಂದ ನಡೆದ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು.
ಎಪಿಎಂಸಿ ಆವರಣದಲ್ಲಿ ಹೂವು ಮಾರಾಟ, ಕುರಿ, ಮೇಕೆ ಮಾರಾಟಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಡಿ.ಕ್ರಾಸ್ನಲ್ಲಿ ಮಾರಾಟ ಮಾಡುತ್ತಿರುವ ಹೂವಿನ ಅಂಗಡಿಗಳನ್ನು ಎಪಿಎಂಸಿ ಆವರಣದಲ್ಲಿಯೇ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗುತ್ತಿದೆ.
ತರಕಾರಿ ಮಾರುಕಟ್ಟೆ ಆವರಣದಲ್ಲಿ ಕಸದ ನಿರ್ವಹಣೆ, ರಾತ್ರಿ ವೇಳೆ ಅಂಗಡಿಗಳ ಕಾವಲು, ಬೀದಿ ದೀಪ, ರಸ್ತೆ ಬದಿಯಲ್ಲಿನ ತರಕಾರಿ ಅಂಗಡಿಗಳನ್ನು ನಿಗದಿತ ಸ್ಥಳದಲ್ಲೇ ಇಟ್ಟು ವ್ಯಾಪಾರ ಮಾಡುವುದು, ಎಪಿಎಂಸಿ ಆವರಣಕ್ಕೆ ಗ್ರಾಹಕರು ಬರುವಂತೆ ಅನುಕೂಲವಾಗಲು ಎಲ್ಲ ಗೇಟ್ಗಳನ್ನು ದಿನದ ಎಲ್ಲ ಸಮಯದಲ್ಲೂ ತೆರೆಯುವುದು ಸೇರಿದಂತೆ ವಿವಿಧ ಸುಧಾರಣೆಗಳನ್ನು ತರಲಾಗುತ್ತಿದೆ.
ಇದಕ್ಕೆ ವರ್ತಕರು ಹಾಗೂ ಸಾರ್ವಜನಿಕರು ಸಹಕರಿಸುವ ಮೂಲಕ ಎಪಿಎಂಸಿ ಆರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಅಭಿನಂದನ ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷೆ ಅಮರಾವತಿ, ಟಿಎಪಿಎಂಸಿಎಸ್ ಅಧ್ಯಕ್ಷ ಎಂ.ಗೋವಿಂದರಾಜು, ದಿನಸಿ ವರ್ತಕರ ಸಂಘದ ಅಧ್ಯಕ್ಷ ಕೆ.ಎಚ್.ಪ್ರಸನ್ನ, ತರಕಾರಿ ವರ್ತಕರ ಸಂಘದ ಅಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರಾಮು, ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ್ರೆಡ್ಡಿ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.