ದೊಡ್ಡಬಳ್ಳಾಪುರ: ‘ನಗರಸಭೆಯಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಈ ಬಗ್ಗೆ ಪ್ರಶ್ನಿಸುತ್ತಿರುವ ವಿರೋಧ ಪಕ್ಷದ ನಗರಸಭಾ ಸದಸ್ಯರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಜೆಡಿಎಸ್ ಹಾಗೂ ಕನ್ನಡ ಪಕ್ಷದ ವತಿಯಿಂದ ಬುಧವಾರ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ಆರ್. ಗೋವಿಂದರಾಜು, ನಗರಸಭೆಯಲ್ಲಿ ಆಡಳಿತ ಎನ್ನುವುದು ಬೇಕಾ ಬಿಟ್ಟಿಯಾಗಿದೆ. ಅಧಿಕಾರಿಗಳಿಗೆ ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದ್ದು, ಕೆಲ ಸದಸ್ಯರು ಅಧಿಕಾರಿಗಳೊಂದಿಗೆ ಶಾಮೀಲಾಗಿರುವುದು ಕಂಡು ಬಂದಿದೆ.
ಈ ಹಿಂದಿನ ಅವಧಿಯಲ್ಲಿ ಆಡಳಿತ ಪಕ್ಷದಲ್ಲಿದ್ದ ನಾವೇ ಅಕ್ರಮ ಖಾತೆಗಳ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೆವು. ಆದರೆ ಈಗ ಹಲವಾರು ಹಗರಣಗಳು ಅಕ್ರಮ ಖಾತೆಗಳಾಗುತ್ತಿದ್ದರೂ ನೋಡಿಯೂ ನೋಡದಂತೆ ಕುಳಿತಿದ್ದಾರೆ ಎಂದು ದೂರಿದರು.
ಕನ್ನಡ ಪಕ್ಷದ ನಗರಸಭಾ ಸದಸ್ಯೆ ಮಂಜುಳಾ ಆಂಜನೇಯ ಮಾತನಾಡಿ, ಹಿಂದಿನ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಈಗ ಆರೋಪ ಮಾಡುತ್ತಿರುವವರು ಆಗ ಏನು ಮಾಡುತ್ತಿದ್ದರು ಎಂದರು.
ಕನ್ನಡಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಕಾರ್ಯದರ್ಶಿ ಡಿ.ಪಿ. ಆಂಜನೇಯ, ‘ನಗರಸಭೆಯ ಪೌರ ಕಾರ್ಮಿಕರಿಗೆ ನೀಡಲಾಗುವ ಚಪ್ಪಲಿ ಮತ್ತು ಟವೆಲ್ಗಳ ಖರೀದಿಯಲ್ಲಿ ಭ್ರಷ್ಟಾಚಾರವೆಸಗಿದ್ದಾರೆ.
ನಾವು ಯಾರೇ ಅಧ್ಯಕ್ಷರಾದರೂ ಅವರಿಗೆ ಅಭಿನಂದಿಸಿ ನಗರದ ಅಭಿವೃದ್ಧಿಗೆ ನಮ್ಮ ಬೆಂಬಲ ನೀಡಿದ್ದೆವು’ ಎಂದರು. ಸದಸ್ಯ ವಡ್ಡರಹಳ್ಳಿ ರವಿಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಶಂಷುನ್ನೀಸಾ, ಸದಸ್ಯರಾದ ಆರ್.ಕೆಂಪರಾಜು, ಪಿ.ಸಿ. ಲಕ್ಷ್ಮೀನಾರಾಯಣ್, ಶಿವಕುಮಾರ್, ಮಾಜಿ ಸದಸ್ಯ ಜಿ. ಸತ್ಯನಾರಾಯಣ್, ನಾಗರಾಜು, ವೆಂಕಟೇಶ್, ಪ್ರಕಾಶ್ ರಾವ್, ರಮೇಶ್, ಕೆರುಮಲು ಬದ್ರಿ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.