ದೊಡ್ಡಬಳ್ಳಾಪುರ: ನಗರದ ಒಳ ಚರಂಡಿಯಿಂದ ಹೊರಹಾಕಿದ ತ್ಯಾಜ್ಯ ನೀರು ಚಿಕ್ಕತುಮಕೂರಿನ ಸಂಸ್ಕರಣಾ ಘಟಕದಿಂದ ಶುದ್ಧೀಕರಿಸದೇ ಕೆರೆಗೆ ಸೇರುತ್ತಿದ್ದು, ಕೆರೆ ಹಾಗೂ ಸುತ್ತಮುತ್ತಲ ವಾತಾವರಣ ಕಲುಷಿತವಾಗುತ್ತಿದೆ ಎಂದು ಶಶಿಕುಮಾರ್ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ನಗರದಲ್ಲಿ ಒಳಚರಂಡಿ ಕಾಮಗಾರಿಗಳಿಗಿದ್ದ ಅಡ್ಡಿ ಆತಂಕಗಳು ದೂರವಾಗಿ ಕಾಮಗಾರಿ ಮುಕ್ತಾಯವಾಗಿದೆ. ಈ ನಡುವೆ ಒಳಚರಂಡಿ ಯೋಜನೆಯಲ್ಲಿ ತ್ಯಾಜ್ಯ ನೀರು ಸಂಗ್ರಹ, ಸಂಸ್ಕರಣೆಗಾಗಿ ಚಿಕ್ಕತುಮಕೂರು ಕೆರೆ ಅಂಗಳದಲ್ಲಿ ಬೃಹತ್ ಕಾಲುವೆ ಮಾದರಿಯ ಹೊಂಡಗಳನ್ನು ನಿರ್ಮಿಸಲಾಗಿದೆ.
ತ್ಯಾಜ್ಯ ನೀರು ಈ ಹೊಂಡಗಳಲ್ಲಿ ಸಂಸ್ಕರಿಸಿ ಅನಂತರ ಶುದ್ಧೀಕರಿಸಬೇಕು. ಆದರೆ ಇಲ್ಲಿ ಯಾವುದೇ ಶುದ್ಧೀಕರಣ ನಡೆಯುತ್ತಿಲ್ಲ. ರಾತ್ರಿ ವೇಳೆ ಹೊಂಡಗಳಲ್ಲಿ ನೀರು ಹೋಗದೇ ನೇರವಾಗಿ ಚಿಕ್ಕತುಮಕೂರು ಕೆರೆಗೆ ಸೇರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರಾದ ಸಂಜನ್ಗೌಡ ಅವರು.
ಮಜರಾಹೊಸಹಳ್ಳಿ, ಚಿಕ್ಕತುಮ ಕೂರು, ತಿಪ್ಪಾಪುರ ಮತ್ತು ವೀರಾಪುರ ಗ್ರಾಮಗಳ ನಡುವೆ ಇರುವ ಕೆರೆಯಲ್ಲಿ ತ್ಯಾಜ್ಯ ನೀರು ಹರಿದು ಬರುತ್ತಿರುವುದರಿಂದ ಕೆರೆ ಪೂರ್ಣ ಕಲುಷಿತಗೊಂಡಿದೆ. ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದಲ್ಲದೇ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಸಹ ಈ ಕೆರೆಗೆ ಸೇರುತ್ತಿದೆ. ವಾಸನೆ ಸಹ ಹೆಚ್ಚಾಗಿದ್ದು ಸುತ್ತಲಿನ ಗ್ರಾಮಸ್ಥರು ಅಪಾಯಕಾರಿ ರೋಗಗಳಿಂದ ನರಳುತ್ತಿದ್ದಾರೆ.
ಈ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರಾದ ಆಕಾಶ್, ರಮೇಶ್ ದೂರಿದ್ದಾರೆ.
ವೈಜ್ಞಾನಿಕವಾಗಿಯೇ ಇದೆ: ಪೌರಾಯುಕ್ತ ಚಿಕ್ಕತುಮಕೂರಿನ ಸಂಸ್ಕರಣಾ ಘಟಕವನ್ನು ವೈಜ್ಞಾನಿಕವಾಗಿ ರೂಪಿಸಲಾಗಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯ ಅನುಮತಿ ಪಡೆದೇ ಘಟಕವನ್ನು ನಡೆಸಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಡಾ.ಪಿ. ಬಿಳಿಕೆಂಚಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.