ADVERTISEMENT

‘ಗಲ್ಲಿ ಕ್ರಿಕೆಟ್‌ಗೂ ಶಿಸ್ತು ಅತಿ ಮುಖ್ಯ’

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:43 IST
Last Updated 25 ಏಪ್ರಿಲ್ 2017, 6:43 IST

ದೇವನಹಳ್ಳಿ: ‘ಉಜ್ವಲವಾಗಿರುವ ಕ್ರೀಡಾ ಕ್ಷೇತ್ರದಲ್ಲಿ ಗಲ್ಲಿ ಕ್ರಿಕೆಟ್ ಆಟಕ್ಕೂ ಶಿಸ್ತು ಅತಿ ಮುಖ್ಯವೆಂದು’ ರಾಷ್ಟ್ರೀಯ ಅಂಧರ ಕ್ರಿಕೇಟ್ ತಂಡದ ತರಬೇತುದಾರ ಪ್ಯಾಟ್ರಿಕ್ ರಾಜ್ ಕುಮಾರ್ ತಿಳಿಸಿದರು.

ದೇವನಹಳ್ಳಿ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಸನ್ನಿಧಿ ಪ್ರತಿಷ್ಠಾನದ ವತಿಯಿಂದ ನಡೆದ ಟೆನ್ನಿಸ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಯುವ ಸಮುದಾಯಕ್ಕೆ ನಗರ ಪ್ರದೇಶದಲ್ಲಿ ಕ್ರೀಡಾಂಗಣದ ಕೊರತೆ ಇದೆ. ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಇಲ್ಲ. ಉತ್ತಮ ಕ್ರೀಡಾಪಟುಗಳಿಗೆ ಅವಕಾಶ ಇದ್ದೆ ಇರುತ್ತದೆ .ಅನೇಕ ಕ್ರೀಡಾಪಟಗಳು ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ಫೇಸ್‌ಬುಕ್, ವಾಟ್ಸ್‌ ಆ್ಯಪ್‌, ಗೇಮ್ ಗಳಲ್ಲೆ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿರುವುದು ವಿಷಾದನೀಯ ಎಂದರು.

ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್. ರವಿಕುಮಾರ್ ಹಾಗೂ ಮುಖಂಡ ಡಿ.ಆರ್.ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಕ್ರಿಕೆಟ್ ಮುಂಚೂಣಿ ಆಟವಾಗಿದ್ದರೂ ದೇಶಿ ಕ್ರೀಡೆಯಾದ ಕಬಡ್ಡಿ, ಕುಸ್ತಿ, ಪ್ರವರ್ಧಮಾನಕ್ಕೆ ಬರುತ್ತಿದೆ. ಆಟಗಾರರಿಗೆ ಆಸಕ್ತಿ ಹೆಚ್ಚಿಸಲು ಉತ್ತಮ ಕ್ರೀಡಾಂಗಣ ವ್ಯವಸ್ಥೆ ತಾಲ್ಲೂಕಿನಲ್ಲಿ ಈವರೆವಿಗೂ ಆಗಿಲ್ಲ ಎಂದರು.

ADVERTISEMENT

ಪಂದ್ಯಾವಳಿ ಪ್ರಾಯೋಜಕ ಹಾಗೂ ಸನ್ನಿಧಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಸನ್ನಿಧಿ ಎಂ. ಶ್ರೀನಿವಾಸ್ ಮಾತನಾಡಿ, ಕ್ರೀಡೆ ಎಂಬುದು ನಿರಂತರ ತೊಡಗಿಸಿಕೊಳ್ಳುವ ಚಟುವಟಿಕೆ, ತರಬೇತಿ ಕಠಿಣ ಪರಿಶ್ರಮದಿಂದ ಮಾತ್ರ ಗೆಲುವು ಸಾಧ್ಯ ಎಂದರು.

ಹಿರಿಯ ಸಲಹೆಗಾರ ವೆಂಕಟೇಶ್, ಯುವ ಸನ್ನಿಧಿ ಅಧ್ಯಕ್ಷ ಆಂಜಿನಪ್ಪ ಮತ್ತು ನಾಗರಾಜ್, ಪರಿಸರ ಸಲಹೆಗಾರ ಶಶೀಧರ್, ಪುರಸಭೆ ಸದಸ್ಯ ಎಂ. ನಾರಾಯಣಸ್ವಾಮಿ, ಜೆಡಿಯು ಎಂ. ಶ್ರೀನಿವಾಸ್, ಕೃಷ್ಣಮೂರ್ತಿ, ತೀರ್ಪುಗಾರ ಡಿ.ಎಂ. ಕುಮಾರ್, ನಟರಾಜ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದೇವನಹಳ್ಳಿ ಚಾಂಪಿಯನ್  ಟ್ರೋಫಿ ಜತೆಗೆ ₹ 50 ಸಾವಿರ ಚೆಕ್ ಅನ್ನು ಸೊಮತ್ತನಹಳ್ಳಿ ತಂಡ ಪಡೆದುಕೊಂಡಿತು. ವಿಜಯಪುರ ತಂಡ ಎರಡನೆಯ ಸ್ಥಾನಕ್ಕೆ ತೃಪ್ತಿ ಪಟ್ಟು ₹ 25 ಸಾವಿರ ಚೆಕ್ ಪಾರಿತೋಷಕ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.