ಆನೇಕಲ್: ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಗ್ರಾಮಸಭೆಗಳಲ್ಲಿ ಹಾಜರಾಗುವುದರಿಂದ ಸಮಸ್ಯೆಗಳ ಬಗ್ಗೆ ಪೂರ್ಣ ಚಿತ್ರಣ ದೊರೆಯುತ್ತದೆ. ಸಮಸ್ಯೆಗಳ ನಿವಾರಣೆಗೆ ಅನುಕೂಲವಾಗುತ್ತದೆ. ಹೀಗಾಗಿ ಅಧಿಕಾರಿಗಳು ಗ್ರಾಮಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಶೋಕನ್ ನುಡಿದರು.
ಅವರು ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಮಂಗಳವಾರ ನಡೆದ ಗ್ರಾಮಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪಡಿತರ ಚೀಟಿ ವಿತರಣೆ, ಆಶ್ರಯ ಫಲಾನುಭವಿಗಳ ಆಯ್ಕೆ, ನಿವೇಶನಗಳ ಹಂಚಿಕೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿರುವ ತೊಡಕುಗಳ ಬಗ್ಗೆ ಗ್ರಾಮಸಭೆಯಲ್ಲಿ ಜನರು ಬೆಳಕು ಚೆಲ್ಲಬೇಕು. ಯಾವುದೇ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಹಾಗೂ ವಿವಿಧ ಕಾಮ-ಗಾರಿಗಳನ್ನು ಕೈಗೊಳ್ಳುವ ಮುನ್ನ ವಾರ್ಡ್ಸಭೆಯಲ್ಲಿ ಅಭಿಪ್ರಾಯ ಪಡೆದು ಗ್ರಾಮಸಭೆಯಲ್ಲಿ ಮಂಡಿಸಬೇಕು. ಇದರಿಂದ ಆಡಳಿತ ವಿಕೇಂದ್ರೀಕರಣ ಅರ್ಥಪೂರ್ಣವಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಅಚ್ಯುತರಾಜು ಮಾತನಾಡಿ ಸರ್ಕಾರ ಅನುದಾನಗಳನ್ನು ಮಂಜೂರು ಮಾಡುವಾಗ ಹಿಂದುಳಿದ ಹಾಗೂ ಗಡಿಭಾಗದಲ್ಲಿರುವ ಗ್ರಾ.ಪಂ.ಗಳಿಗ ವಿಶೇಷ ಅನುದಾನ ಮಂಜೂರು ಮಾಡಬೇಕು. ಇಂಡ್ಲವಾಡಿ, ವಣಕನಹಳ್ಳಿ ಮತ್ತು ಸಮಂದೂರು ಮತ್ತಿತರ ಗಡಿಭಾಗದ ಗ್ರಾ.ಪಂ.ಗಳಲ್ಲಿ ನೌಕರರಿಗೆ ಸಂಬಳ ನೀಡಲು ಆದಾಯವಿರುವುದಿಲ್ಲ. ಹಾಗಾಗಿ ಅನುದಾನ ಮಂಜೂರು ಮಾಡುವಾಗ ಎಲ್ಲ ಗ್ರಾ.ಪಂ. ಏಕರೂಪ ನೀತಿ ಅನುಸರಿಸಬಾರದು ಎಂದರು.
ಜಿ.ಪಂ. ಸದಸ್ಯ ಜೆ.ನಾರಾಯಣಪ್ಪ, ತಾ.ಪಂ. ಅಧ್ಯಕ್ಷೆ ಶೋಭಾಕೃಷ್ಣಪ್ಪ, ಸದಸ್ಯೆ ರತ್ನಮ್ಮ, ಗ್ರಾ.ಪಂ. ಅಧ್ಯಕ್ಷ ಕುಳ್ಳಪ್ಪ, ಉಪಾಧ್ಯಕ್ಷೆ ಜಯಶೀ್ರ, ಮಾಜಿ ಅಧ್ಯಕ್ಷರಾದ ಸುಮಾ ಶುಭಾನಂದ್, ನಾರಯಣಪ್ಪ, ಮಾಜಿ ಉಪಾಧ್ಯಕ್ಷ ರಾಮಕೃಷ್ಣಪ್ಪ, ಗೋವಿಂದರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.