ADVERTISEMENT

ದೊಡ್ಡಬಳ್ಳಾಪುರ ನಗರಸಭೆ ಆದಾಯದಲ್ಲಿ ಖೋತಾ

ಪೌರಾಡಳಿತ ನಿರ್ದೇಶನಾಲಯ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 9:17 IST
Last Updated 19 ಮಾರ್ಚ್ 2018, 9:17 IST
ದೊಡ್ಡಬಳ್ಳಾಪುರ ನಗರಸಭೆ ಆದಾಯದಲ್ಲಿ ಖೋತಾ
ದೊಡ್ಡಬಳ್ಳಾಪುರ ನಗರಸಭೆ ಆದಾಯದಲ್ಲಿ ಖೋತಾ   

ದೊಡ್ಡಬಳ್ಳಾಪುರ: ನಗರಸಭೆಯಿಂದ ನೀಡಲಾಗುತ್ತಿದ್ದ ಕಟ್ಟಡ ‍ಪರವಾನಗಿಯನ್ನು ನಿಲ್ಲಿಸಿರುವುದರಿಂದ ಮನೆ ನಿರ್ಮಿಸಿಕೊಳ್ಳುವವರು ಪರದಾಡುವಂತಾಗಿದೆ.

‘ಜನವರಿ 16 ರಂದು ಪೌರಾಡಳಿತ ನಿರ್ದೇಶನಾಲಯದಿಂದ ನಗರಸಭೆಗೆ ಬಂದಿರುವ ಸುತ್ತೋಲೆಯಿಂದಾಗಿ ನಗರ ಸಭೆ ವತಿಯಿಂದ ಯಾವುದೇ ರೀತಿಯ ಕಟ್ಟಡ ಪರವಾನಗಿ ನೀಡುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ನಗರಸಭೆಗೆ ಬರಬೇಕಾಗಿದ್ದ ಆದಾಯ ಖೋತಾ ಆಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಯಾರೇ ಮನೆಗಳನ್ನು ನಿರ್ಮಿಸಬೇಕಾದರೆ ನಮ್ಮ ಅನುಮತಿ ಕಡ್ಡಾಯ’ ಎಂಬುದು ಸಂಸ್ಥೆಯ ಸಿಬ್ಬಂದಿ ವಾದವಾಗಿದೆ.

ಇದಲ್ಲದೆ  ಮನೆ ನಿರ್ಮಿಸಲು ಬ್ಯಾಂಕಿನಿಂದ ಸಾಲ ಪಡೆಯಬೇಕಾದರೂ ಕಟ್ಟಡ ಪರವಾನಗಿ ಅತ್ಯಗತ್ಯ. ಆದರೆ ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲ. ಇದರಿಂದ ಸ್ವಂತ ಸೂರು ನಿರ್ಮಿಸಿಕೊಳ್ಳುವ ಕನಸಿಗೆ ಭಂಗ ಬಂದಿದೆ ಎಂದು ನಗರಸಭೆ ಸದಸ್ಯ ಆರ್‌.ಕೆಂಪರಾಜ್‌ ಹೇಳುತ್ತಾರೆ.

ADVERTISEMENT

‘ನಗರದ ಹೊರಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ ಬಡಾವಣೆಗಳಲ್ಲಿನ ನಿವೇಶನಗಳು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗಿರುತ್ತವೆ’ ಎನ್ನುತ್ತಾರೆ.

‘ಆದರೆ ಯೋಜನಾ ಪ್ರಾಧಿಕಾರ ಸ್ಥಾಪನೆಗೂ ಮುನ್ನ ಬೆಳೆದಿರುವ ಹಳೆ ನಗರದಲ್ಲಿರುವ (ನಗರದ ಒಳಭಾಗದಲ್ಲಿ) ಖಾಲಿ ನಿವೇಶನಗಳ ಹಾಗೂ ಹಳೆ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ನಿರ್ಮಿಸುವ ಮಾಲೀಕರಿಗೂ ನಿವೇಶನ ನಕ್ಷೆ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗಿ
ರಬೇಕು ಎನ್ನುವ ನಿಯಮ ಸರಿಯಾದ ಕ್ರಮ ಅಲ್ಲ’ ಎಂದು ಅವರು ಹೇಳುತ್ತಾರೆ.

ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗಿದ್ದು ನಗರದ ಒಳಭಾಗದಲ್ಲಿ ಮನೆ ನಿರ್ಮಿಸಿಕೊಳ್ಳುವವರಿಗೆ ಕಟ್ಟಡ ಪರವಾನಗಿ ನೀಡಲೇಬೇಕು ಎಂದು ಅವರು ಒತ್ತಾಯಿಸುತ್ತಾರೆ.

ಇಲ್ಲಿನ ಅನಾನುಕೂಲದ ಬಗ್ಗೆ ಹಾಗೂ ವಾಸ್ತವದ ಸ್ಥಿತಿಯ ಕುರಿತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಹಾಗೂ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಲಾಗಿದೆ.

ಒಂದು ವಾರದ ಗಡುವು: ನಗರಸಭೆಯಿಂದ ಕಟ್ಟಡ ಪರವಾನಗಿ ನೀಡುವುದನ್ನು ನಿಲ್ಲಿಸಿರುವ ಕುರಿತು ಮಾಹಿತಿ ನೀಡಿರುವ ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌, ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಮೇರೆಗೆ ಇದನ್ನು ನಿಲ್ಲಿಸಲಾಗಿದೆ ಎಂದು ಅವರು ತಿಳಿಸುತ್ತಾರೆ.

ಆದರೆ ವಾಸ್ತವದಲ್ಲಿನ ಸಮಸ್ಯೆಗಳು ಹಾಗೂ ಇಲ್ಲಿನ ವಸ್ತು ಸ್ಥಿತಿಯ ಬಗ್ಗೆ ಹಿರಿಯ ಅಧಿಕಾರಿಗಳ ಹಾಗೂ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತರಲಾಗುವದು. ಒಂದು ವಾರದ ಒಳಗಾಗಿ ಸಮಸ್ಯೆಯನ್ನು ಬಗೆಹರಿಸಿ ಪರವಾನಗಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.