ADVERTISEMENT

ನಾಳೆ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ

ಕೋಲಾಟ, ಡೊಳ್ಳು ಕುಣಿತ, ನಾಸಿಕ್‌ ಬ್ಯಾಂಡ್‌ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಭಾಗಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 8:55 IST
Last Updated 23 ಮಾರ್ಚ್ 2018, 8:55 IST
ಆನೇಕಲ್‌ನ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದ ನೋಟ
ಆನೇಕಲ್‌ನ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದ ನೋಟ   

ಆನೇಕಲ್‌: ಪಟ್ಟಣದ ಸಹದೇವಪುರದಲ್ಲಿ ನೆಲೆಸಿರುವ ಆನೇಕಲ್‌ನ ಅಧಿದೈವ ಶ್ರೀ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಶನಿವಾರ (ಮಾರ್ಚ್ 24) ನಡೆಯಲಿದೆ.

ಅ‌ಂದು ಮಧ್ಯಾಹ್ನ 1.30ರ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ಬ್ರಹ್ಮರಥೋತ್ಸವದ ಅಂಗವಾಗಿ ದೂಳೋತ್ಸವ, ತೆಪ್ಪೋತ್ಸವ, ಉಂಜಲಸೇವೆ, ಗರುಡೋತ್ಸವ ನಡೆಯಲಿದೆ. ತಮಿಳುನಾಡು ಹಾಗೂ ಆನೇಕಲ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಥೋತ್ಸವದಲ್ಲಿ ಕೋಲಾಟ, ಡೊಳ್ಳು ಕುಣಿತ, ನಾಸಿಕ್‌ಬ್ಯಾಂಡ್‌ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.

ADVERTISEMENT

ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದು ಸ್ವಚ್ಫತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಡಿಯುವ ನೀರು ಪೂರೈಕೆ ಹಾಗೂ ದೀಪಾಲಂಕಾರ ಮಾಡಲಾಗಿದ್ದು, ಪಟ್ಟಣದ ತಿಮ್ಮರಾಯಸ್ವಾಮಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ಪುರಸಭೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪುರಸಭಾ ಅಧ್ಯಕ್ಷ ಪಿ.ಶಂಕರ್‌ಕುಮಾರ್‌ ತಿಳಿಸಿದರು.

ದೇವಾಲಯದ ಇತಿಹಾಸ: ಆನೇಕಲ್‌ನ ಪಾಳೆಗಾರರಾಗಿದ್ದ ತಿಮ್ಮೇಗೌಡರು ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ಅವರ ಬಳಿಯಿದ್ದ ಗೋವುಗಳ ಹಿಂಡು ಮೇಯಿಸಲು ಗೋಪಾಲಕರು ಸಹದೇವಪುರ ಎಂಬ ಅರಣ್ಯ ಪ್ರದೇಶಕ್ಕೆ ತೆರಳುತ್ತಿದ್ದರು.

ಮೇಯಲು ಹೋಗುತ್ತಿದ್ದ ಹಿಂಡಿನ ಹಸುವೊಂದು ಸಂಜೆ ಕರುವಿಗೆ ಹಾಲು ಕೊಡದೆ ಇದ್ದುದ್ದನ್ನು ಗಮನಿಸಿದ ತಿಮ್ಮೇಗೌಡರು ಗೋಪಾಲಕ
ನನ್ನುಅನುಮಾನಿಸಿ ಗೋಪಾಲಕನಿಗೆ ತಿಳಿಯದಂತೆ ಹಸುವನ್ನು ಹಿಂಬಾಲಿ ಸಿದರು. ಹಸು ಕೆಲ ಕಾಲ ಮೇದು ಕಾಡಿನಲ್ಲಿದ್ದ ಹುತ್ತವೊಂದರ ಬಳಿ ಕೆಚ್ಚಲಿನ ಹಾಲನ್ನು ಹುತ್ತದಲ್ಲಿ ಸುರಿಸುತ್ತಿದ್ದನ್ನು ಕಂಡರು. ಕುತೂಹಲಗೊಂಡ ಗೌಡರು ಮನೆಗೆ ಬಂದರು. ಅದೇ ದಿನ ರಾತ್ರಿ ಶ್ರೀನಿವಾಸ ದೇವರು ಕನಸಿನಲ್ಲಿ ಬಂದು ತಾನು ಹುತ್ತದಲ್ಲಿ ನೆಲೆಸಿದ್ದೇನೆ. ಇಲ್ಲಿಯೇ ಮಂದಿರ ನಿರ್ಮಿಸಿ ಪೂಜೆಗೆ ಏರ್ಪಾಡು ಮಾಡುವಂತೆ ಹೇಳಿತು ಎನ್ನುವುದು ಪೌರಾಣಿಕ ಐಹಿತ್ಯ.

ಹುತ್ತದ ಬಳಿ ನೋಡಿದಾಗ ನಾಗರ ರೂಪದ ಶಿಲೆಯೊಂದು ಕಾಣಿಸಿತು. ಇದರಿಂದ ಸಂತಸಗೊಂಡ ಸಂತಸಗೊಂಡ ಪಾಳೇಗಾರ ತಿಮ್ಮೇ ಗೌಡರು ಸಣ್ಣ ಗುಡಿಯನ್ನು ಈಗಿನ ದೇವಾಲಯದ ಸ್ಥಳದಲ್ಲಿ ನಿರ್ಮಿಸಿದರು ಎಂಬುದು ಜನರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.