ADVERTISEMENT

ನೀರು, ಮೇವು ಪೂರೈಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 8:50 IST
Last Updated 30 ಜನವರಿ 2017, 8:50 IST
ನೀರು, ಮೇವು ಪೂರೈಸಲು ಆಗ್ರಹಿಸಿ ಪ್ರತಿಭಟನೆ
ನೀರು, ಮೇವು ಪೂರೈಸಲು ಆಗ್ರಹಿಸಿ ಪ್ರತಿಭಟನೆ   

ದೊಡ್ಡಬಳ್ಳಾಪುರ: ಬರಪೀಡಿತ ತಾಲ್ಲೂಕು ಎಂದು  ಘೋಷಣೆಯಾಗಿರುವ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಮೇವು ಸೇರಿದಂತೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಸಮರ್ಪಕ ಮೇವು ದಾಸ್ತಾನು ಸೇರಿದಂತೆ ನೀರಿನ ಬವಣೆ ನೀಗಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಕರುನಾಡ ಸೇನೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್‌ತರಿದಾಳು ಆಗ್ರಹಿಸಿದ್ದಾರೆ.

ಅವರು ಕರುನಾಡ ಸೇನೆ ತಾಲ್ಲೂಕು ಘಟಕ ಜಾನುವಾರುಗಳಿಗೆ ಸಮರ್ಪಕ ಮೇವು, ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂದೆ ಶನಿವಾರ ಪ್ರತಿಭಟನೆ ವೇಳೆ ಮಾತನಾಡಿದರು.

ತಾಲ್ಲೂಕಿನ ಐದು ಹೋಬಳಿಗಳಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆ ಕೇಂದ್ರಗಳು ಸ್ಥಾಪನೆಯಾಗಿದ್ದು, ಮೇವು ಪೂರೈಕೆ ಸಮರ್ಪಕವಾಗಿಲ್ಲ. ಮೇವು ಕೇಂದ್ರಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ನಗರದಲ್ಲಿ ಎರಡರಿಂದ ಮೂರು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿರುವ ಕೊಳವೆ ಬಾವಿಗಳ ನೀರಿನ ಮಟ್ಟವೂ ಕುಸಿಯುತ್ತಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಬರಗಾಲದ ಹಿನ್ನೆಲೆ ತಾಲ್ಲೂಕಿನ ಬಹುತೇಕ ರೈತರು ಜಾನುವಾರುಗಳನ್ನು ಮಾರಿಕೊಂಡು ಅತಂತ್ರ ಸ್ಥಿತಿಗೆ ತಲುಪಿದ್ದಾರೆ ಎಂದರು.

ಪ್ರತಿಭಟನೆ ನಂತರ ಕರುನಾಡ ಸೇನೆಯ ಹಕ್ಕೊತ್ತಾಯಗಳನ್ನು  ಗ್ರೇಡ್ 2 ತಹಶೀಲ್ದಾರ್ ಸಿ.ರಾಮಲಿಂಗಯ್ಯ ಅವರಿಗೆ ನೀಡಿದರು. ಪ್ರತಿಭಟನೆಯಲ್ಲಿ ಕರುನಾಡ ಸೇನೆ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಆರ್.ಕೇಶವಮೂರ್ತಿ,  ಪ್ರಧಾನ ಕಾರ್ಯದರ್ಶಿ ಅನಿಲ್‌ಅದ್ದೆ, ನಗರ ಉಪಾಧ್ಯಕ್ಷ ವಿ.ನಾಗರಾಜು, ತಾಲ್ಲೂಕು ಕಾರ್ಯದರ್ಶಿ ಹರಿಕುಮಾರ್, ತಾಲ್ಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಕೊತ್ತೂರಪ್ಪ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಸಧೀರ್, ಕಾನೂನು ಸಲಹೆಗಾರ ರೇಣುಕಾಮೂರ್ತಿ, ಖಜಾಂಚಿ ತಿರುಮಲೇಶ್, ನಗರ ಕಾರ್ಯದರ್ಶಿ ನಂಜುಡರಾಯ್, ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.