ವಿಜಯಪುರ: ಇಲ್ಲಿನ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದ ಬಸ್ಸುಗಳು ಹಾಗೂ ಇತರ ವಾಹನಗಳಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಪ್ರಜಾವಾಣಿಯಲ್ಲಿ ‘ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ’ ಎಂಬ ತಲೆ ಬರಹದಡಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಇದೀಗ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಸ್ ನಿಲ್ದಾಣಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಶಿಡ್ಲಘಟ್ಟದಿಂದ ಬರುವ ಬಸ್ಸುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದರು. ಪ್ರಯಾಣಿಕರು ನಿಲ್ದಾಣದಲ್ಲಿ ಬಸ್ಸುಗಳು ತಿರುವು ಪಡೆದುಕೊಳ್ಳುವ ಮೈದಾನದಲ್ಲೇ ನಿಂತುಕೊಳ್ಳುತ್ತಿದ್ದ ಕಾರಣ ಅವು ಡಿಕ್ಕಿ ಹೊಡೆದು ಅಮಾಯಕರು ಸಾವನ್ನಪ್ಪಿದ್ದರು. ಜನರಿಗೆ ಸಂಚಾರಕ್ಕೆ ತೊಂದರೆಯಾಗಿತ್ತು.
ನಿಲ್ದಾಣದಲ್ಲಿ ಬಸ್ಸುಗಳ ನಿಲುಗಡೆಗೆ ಅಳವಡಿಸಲಾಗಿದ್ದ ಪ್ಲಾಟ್ ಫಾರ್ಮ್ ಸಮೀಪದ ನಿರ್ಮಿಸಿದ್ದ ಕಟ್ಟಡದಿಂದ ಬಸ್ಸುಗಳ ನಿಲುಗಡೆಗೆ ತೊಂದರೆಯಾಗಿತ್ತು. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪುರಸಭೆಗೆ ಮನವಿ ಮಾಡಿದ್ದರು. ಇದೀಗ ಬಸ್ಸುಗಳ ನಿಲುಗಡೆಗೆ ಅಡ್ಡಿಯಾಗಿದ್ದ ಕಟ್ಟಡಗಳನ್ನು ಪುರಸಭೆಯವರು ತೆರವುಗೊಳಿಸಿದ್ದರಿಂದ ಅನುಕೂಲವಾಗಿದೆ.
ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೆಬಲ್ ವೆಂಕಟೇಶ್ ಅವರು ಯಾವುದೇ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡುತ್ತಿಲ್ಲ. ಇಲ್ಲಿಗೆ ಬರುವ ಪ್ರಯಾಣಿಕರು ಮೈದಾನದಲ್ಲಿ ನಿಲ್ಲಲ್ಲು ಅವಕಾಶ ನೀಡದೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ವಾಹನ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ ಎಂದು ಜನರು ಮೆಚ್ಚುಗೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.