ADVERTISEMENT

ಬೆಂಗಳೂರು ಹೆದ್ದಾರಿ, ಅಪಘಾತ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 9:01 IST
Last Updated 21 ಸೆಪ್ಟೆಂಬರ್ 2017, 9:01 IST

ವಿಜಯಪುರ: ಹೋಬಳಿಯ ವೆಂಕಟಗಿರಿಕೋಟೆ ಮಾರ್ಗವಾಗಿ ಆವತಿಯ ಮೂಲಕ ರಾಜಧಾನಿ ಬೆಂಗಳೂರಿನ ಕಡೆಗೆ ಹಾದುಹೋಗುವಂತಹ ಹೆದ್ದಾರಿಯಲ್ಲಿ ಆಗುವಂತಹ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಮಾರಪ್ಪ, ಶಿವಕುಮಾರ್, ಶಶಿಧರ್, ಹರೀಶ್ ಮುಂತಾದವರು ಒತ್ತಾಯಿಸಿದ್ದಾರೆ.

ಇಲ್ಲಿನ ಹೆದ್ದಾರಿಯ ಮೂಲಕ ಹಾದುಹೋಗುವಂತಹ ವಾಹನಗಳು ಅತಿಯಾದ ವೇಗದಲ್ಲಿ ಬರುವುದರಿಂದ ವಾಹನಗಳಿಗೆ ಸಿಲುಕಿ ಹೆದ್ದಾರಿಯ ಸಮೀಪದಲ್ಲಿರುವ ಹಳ್ಳಿಗಳ ಜನರು ಪ್ರಾಣಗಳು ಕಳೆದುಕೊಂಡಿದ್ದಾರೆ.

ಬೆಂಗಳೂರಿನಿಂದ ಆಂದ್ರಪ್ರದೇಶದ ಕಡೆಗೆ ಸಂಚಾರ ಮಾಡುವ ಮುಖ್ಯ ಹೆದ್ದಾರಿಯಾಗಿರುವುದರಿಂದ ಹೆಚ್ಚಿನ ವಾಹನ ಚಾಲಕರು ಇದೇ ರಸ್ತೆಯನ್ನೆ ಬಳಕೆ ಮಾಡಿಕೊಳ್ಳುತ್ತಾರೆ. ಇದರಿಂದ ರಾತ್ರಿ 8 ಗಂಟೆಯ ನಂತರ ಆಂಧ್ರಪ್ರದೇಶದಿಂದ ಬಾಗೇಪಲ್ಲಿ ಚಿಕ್ಕಬಳ್ಳಾಪುರ ಮೂಲಕ ಬೆಂಗಳೂರಿನ ಕಡೆಗೆ ಹಾದುಹೋಗುವ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ.

ADVERTISEMENT

ಪ್ರತಿನಿತ್ಯ ಬೆಳಗಿನ ಜಾವ 6 ಗಂಟೆಗೆ ನಿದ್ದೆಗಣ್ಣಿನಲ್ಲೆ ನೂರಾರು ಮಂದಿ ಕೂಲಿ ಕಾರ್ಮಿಕರು ದ್ರಾಕ್ಷಿ ಕತ್ತರಿಸುವ ಕೆಲಸಕ್ಕಾಗಿ ಹೋಗಲು ವೆಂಕಟಗಿರಿಕೋಟೆ ಗೇಟ್ ನಲ್ಲಿ ಜಮಾಯಿಸುತ್ತಾರೆ.

ರಾತ್ರಿಯ ವೇಳೆ 10 ಗಂಟೆಯ ನಂತರ ಹೈದ್ರಾಬಾದ್, ಅನಂತಪುರ, ಹಿಂದೂಪುರ ಸೇರಿದಂತೆ ದೂರದಿಂದ ಬರುವಂತಹ ಬೃಹತ್ ಗಾತ್ರದ ವಾಹನಗಳ ಚಾಲಕರು ರಾತ್ರಿವೇಳೆ ವೇಗವಾಗಿ ವಾಹನಗಳನ್ನು ಚಾಲನೆ ಮಾಡಿಕೊಂಡು ಬರುತ್ತಾರೆ. ವಾಹನಗಳ ಚಾಲಕರನ್ನು ತಪಾಸಣೆ ಮಾಡಲು ಪೊಲೀಸರಾಗಲಿ ಅಥವಾ ತಪಾಸಣಾ ಕೇಂದ್ರಗಳಾಗಲಿ ಇಲ್ಲ. ಇದರಿಂದ ಹೆಚ್ಚಿನ ದಟ್ಟಣೆ ಇರುವ ವೆಂಕಟಗಿರಿಕೋಟೆ ಕ್ರಾಸ್ ನಲ್ಲಿ ವಾಹನಗಳಿಗೆ ಸಿಕ್ಕಿ ಅನೇಕರು ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸಿದಾಗ ಪ್ರಯಾಣಿಕರ ಸಾವು ಸಂಭವಿಸುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ವಾರದ ಏಳು ದಿನಗಳಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತಂತಹ ಆಂಬುಲೆನ್ಸ್ ಮತ್ತು ಗಸ್ತುಪಡೆಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯೋಜನೆ ಮಾಡಲು ಆದೇಶ ಮಾಡಿತ್ತು. ಹೆದ್ದಾರಿಗಳಲ್ಲಿ ಸಂಚರಿಸುವ ಆಂಬುಲೆನ್ಸ್ ಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ.

ಅಪಘಾತಗಳು ಸಂಭವಿಸಿದ ತಕ್ಷಣ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರ ಆಸ್ಪತ್ರೆಗಳಿಗೆ ರವಾನಿಸಲು ಆಂಬುಲೆನ್ಸ್ಗಳು ಸಹಕಾರಿಯಾಗಲಿವೆ ಎಂದು ಆದೇಶ ಹೊರಡಿಸಿದೆ. ಈ ಯೋಜನೆಯು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ವಿಜಯಪುರ ವೇಣುಗೋಪಾಲ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.