ADVERTISEMENT

‘ಬೆಸ್ಕಾಂ’ ಕಚೇರಿಗೆ ರೈತರ ಮುತ್ತಿಗೆ

ಕೇವಲ 4 ಗಂಟೆ ಮಾತ್ರ ವಿದ್ಯುತ್ ಪೂರೈಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 6:32 IST
Last Updated 18 ಜನವರಿ 2017, 6:32 IST
ವಿಜಯಪುರ ಪಟ್ಟಣದ ‘ಬೆಸ್ಕಾಂ’ ಕಚೇರಿಯ ಮುಂದೆ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ರೈತರು ಪ್ರತಿಭಟನೆ ನಡೆಸಿದರು
ವಿಜಯಪುರ ಪಟ್ಟಣದ ‘ಬೆಸ್ಕಾಂ’ ಕಚೇರಿಯ ಮುಂದೆ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ರೈತರು ಪ್ರತಿಭಟನೆ ನಡೆಸಿದರು   

ವಿಜಯಪುರ:  ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ‘ಬೆಸ್ಕಾಂ’ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ‘ಬೆಸ್ಕಾಂ’ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ಮಾಡಿದರು.

ಪಟ್ಟಣದ ‘ಬೆಸ್ಕಾಂ’ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಅವರು, ಸರ್ಕಾರದ ನಿರ್ದೇಶನದಂತೆ ರೈತರ ಪಂಪ್ ಸೆಟ್ ಗಳಿಗೆ ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ ನಮಗೆ ಪೂರೈಕೆಯಾಗುತ್ತಿರುವ ವಿದ್ಯುತ್ ಕೇವಲ 4 ಗಂಟೆಗಳು ಮಾತ್ರ ಎಂದರು.

ಅನೇಕ ಗ್ರಾಮಗಳಲ್ಲಿ ರೈತರ ಪಂಪ್ ಸೆಟ್‌ಗಳಿಗೆ ಕೆಲವೊಮ್ಮೆ ರಾತ್ರಿ 12 ಗಂಟೆಗೆ, ಕೆಲ ಬಾರಿ ಬೆಳಿಗ್ಗೆ 3 ಗಂಟೆಗೆ ವಿದ್ಯುತ್ ಪೂರೈಸಲಾಗುತ್ತಿದೆ. ರೈತರಿಗೆ ಸತತವಾಗಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಸುವ ಭರವಸೆಯನ್ನು ವಿದ್ಯುತ್ ಸಚಿವರು ನೀಡಿದ್ದಾರೆ ಎಂದರು.

ರೈತರು ‘ಬೆಸ್ಕಾಂ’ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದ ವೇಳೆ ವಿದ್ಯುತ್ ಇಲಾಖೆ ಅಧಿಕಾರಿಗಳು  ಇಲ್ಲದೆ ಹೋಗಿದ್ದರಿಂದ ರೈತರುಗಳು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಜಾಯಿಷಿ ನೀಡಿ ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪಟ್ಟು ಹಿಡಿದರು.

ಇಷ್ಟೆಲ್ಲಾ ಆದರೂ ಎಇಇ ನಾರಾಯಣಸ್ವಾಮಿ ಗೌಡ ಅವರು ಸ್ಥಳಕ್ಕೆ ಆಗಮಿಸದೆ ಇದ್ದದ್ದರಿಂದ ರೊಚ್ಚಿಗೆದ್ದ ರೈತರು ಸ್ಥಳಕ್ಕೆ ಬಂದ ಪ್ರಭಾರ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ನಾರಾಯಣ ಸ್ವಾಮಿ, ರೈತ ಮುಖಂಡರಾದ ರಮೇಶ್, ನಾರಾಯಣಸ್ವಾಮಿ, ಅರುಣ್‌ಕುಮಾರ್, ಮುನೇಗೌಡ, ಮಂಜುನಾಥ್ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.