ವಿಜಯಪುರ: ತೀವ್ರ ಮಳೆಯ ಕೊರತೆಯಿಂದಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಬರದೆ ಇರುವುದರ ಪರಿಣಾಮ ಬೆಲೆ ಏರಿಕೆಯ ಬಿಸಿ ಬಡವರು ಹಾಗೂ ಮಧ್ಯಮ ವರ್ಗದವರನ್ನು ಚಿಂತೆಗೀಡು ಮಾಡುತ್ತಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಂದು ತಿಂಗಳಿಂದ ತರಕಾರಿ ಹಾಗೂ ಆಹಾರ ಧಾನ್ಯಗಳ ಬೆಲೆಗಳ ಏರಿಕೆಯಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ. ಪ್ರತಿನಿತ್ಯ ತರಕಾರಿ ಬೆಲೆಗಳು ಹಾಗೂ ಆಹಾರ ಪದಾರ್ಥಗಳ ಬೆಲೆಗಳು ಏರುತ್ತಲೇ ಇವೆ.
ಅಂಗಡಿಗಳಿಗಿಂತ ಸಂತೆಗಳಲ್ಲಿ ತರಕಾರಿಗಳ ಬೆಲೆಗಳು ತುಸು ಕಮ್ಮಿ ಯಾಗುತ್ತವೆ ಎಂದು ಒಂದು ವಾರಪೂರ್ತಿ ಕಾದು ಸಂತೆಗೆ ಬರುವ ಗ್ರಾಹಕರು ಸಂತೆಯಲ್ಲಿನ ಬೆಲೆಗಳನ್ನು ಕಂಡು ಬೆಚ್ಚಿ ಬೀಳುವಂತಾಗಿದೆ.
ಸಂತೆ ಇಲ್ಲದ ದಿನಗಳಲ್ಲಿ ತರಕಾರಿಗಳ ಬೆಲೆ ಎರಡರಷ್ಟಾಗಿರುತ್ತದೆ. ವಾರದವರೆಗೆ ಕಾಯದೆ ಇರುವವರು ದುಬಾರಿ ಬೆಲೆ ತೆತ್ತು ತರಕಾರಿಗಳನ್ನು ಕೊಂಡುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ತರಕಾರಿ ಬೆಲೆಗಳು (ಪ್ರತಿ ಕೆ.ಜಿ.ಗೆ ರೂ.ಗಳಲ್ಲಿ): ಮೆಣಸಿನಕಾಯಿ 80, ಈರುಳ್ಳಿ 20 ಹೀರೆಕಾಯಿ 35 ಸೌತೆಕಾಯಿ , ಬೀನ್ಸ್ 60, ಹಾಗಲಕಾಯಿ 40, ಟೊಮೆಟೊ 40 , ಶುಂಠಿ 160 ರಿಂದ 170, ಆಲೂಗಡ್ಡೆ 20, ಮೂಲಂಗಿ 30, ಕೊತ್ತಂಬರಿ 10 ರೂಪಾಯಿಗೆ ಮೂರು ಕಟ್ಟು, ಮೆಂತೆ ₹10ಕ್ಕೆ 5 ಕಟ್ಟು, ಬೆಂಡೆ 30, ಚವಳಿಕಾಯಿ 40, ಕ್ಯಾರೆಟ್ 40, ನುಗ್ಗೆಕಾಯಿ 40, ಬೀಟ್ರೂಟ್ 20, ಹರವಿ ಸೊಪ್ಪು ₹10ಕ್ಕೆ 2 ಕಟ್ಟು, ನಿಂಬೆ ಹಣ್ಣು 10 ರೂ. 5, ಬೆಳ್ಳುಳ್ಳಿ 80, ದೊಣ್ಣಮೆಣಸಿನಕಾಯಿ 40 ಇದೆ. ಹಿಂದೆ ಕೆಜಿ ಕೊಳ್ಳುತ್ತಿದ್ದವರು ಅರ್ಧ ಕೆಜಿ ಕೊಳ್ಳುತ್ತಿದ್ದಾರೆ. ಅರ್ಧ ಕೆಜಿ ಕೊಳ್ಳುವವರು ಕಾಲು ಕೆಜಿ ಕೊಳ್ಳುವಂತಾಗಿದೆ.
ಆಹಾರ ಪದಾರ್ಥ ಬೆಲೆ (ಪ್ರತಿ ಕೆ.ಜಿ.ಗೆ ರೂ.ಗಳಲ್ಲಿ): ತೊಗರಿ ಬೇಳೆ 60, ಉದ್ದಿನ ಬೇಳೆ 60, ಕೊಬ್ಬರಿ 60, ಕಡ್ಲೆ ಬೇಳೆ 45, ಸಕ್ಕರೆ 30, ಹುಣಸೆ ಹಣ್ಣು 60, ಒಣ ಮೆಣಸಿನಕಾಯಿ 100, ಕಡ್ಲಿ ಹಿಟ್ಟು 50, ಶೇಂಗಾ ಬೀಜ 68, ಮೈದಾಹಿಟ್ಟು 26, ಒಳ್ಳೆಣ್ಣೆ (ಶೇಂಗಾ) ಪ್ರತಿ ಲೀ.ಗೆ ₹85, ಕರಿಎಳ್ಳು 100 ಬಿಳ್ಳಿ ಎಳ್ಳು 100 ಕಡ್ಲಿಕಾಳು 40 ಬಟಾಣಿ 50 ಗಳಾಗಿವೆ.
ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ತರಕಾರಿ ಸೇರಿದಂತೆ ಧಾನ್ಯಗಳ ಬೆಲೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು ಎಂದು ಯಲುವಹಳ್ಳಿ ಮುನಿಯಪ್ಪ ಒತ್ತಾಯಿಸಿದ್ದಾರೆ.
*
ಮಳೆಯಿಲ್ಲ, ಬೆಳೆ ಇಲ್ಲ, ಕೂಲಿ ಸಿಗ್ತಿಲ್ಲ, ಇಂತಹ ಪರಿಸ್ಥಿತಿ ಬೆಲೆಗಳು ಜಾಸ್ತಿಯಾದರೆ ವ್ಯಾಪಾರ ಮಾಡೊದು ಹೇಗೆ?
-ನಂದಿನಿ , ಗ್ರಾಹಕಿ ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.