ADVERTISEMENT

ರಾಗಿ: ತಾಲ್ಲೂಕಿನಲ್ಲಿ ಉತ್ತಮ ಫಸಲು ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 6:23 IST
Last Updated 24 ನವೆಂಬರ್ 2017, 6:23 IST
ವಿಜಯಪುರ ಹೋಬಳಿ ಭಟ್ರೇನಹಳ್ಳಿ ಗ್ರಾಮದ ರೈತ ಜಯರಾಂ ಬೆಳೆದಿರುವ ರಾಗಿ ಬೆಳೆಯೊಂದಿಗೆ
ವಿಜಯಪುರ ಹೋಬಳಿ ಭಟ್ರೇನಹಳ್ಳಿ ಗ್ರಾಮದ ರೈತ ಜಯರಾಂ ಬೆಳೆದಿರುವ ರಾಗಿ ಬೆಳೆಯೊಂದಿಗೆ   

ವಿಜಯಪುರ: ಸತತವಾಗಿ ನಾಲ್ಕೈದು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಬಯಲುಸೀಮೆ ಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ,
ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರಮುಖ ಬೆಳೆಯಾಗಿರುವ ರಾಗಿ ಬೆಳೆಯ ಫಸಲು ಉತ್ತಮವಾಗಿ ಬಂದಿದ್ದು, ಗಗನಮುಖಿಯಾಗಿರುವ ರಾಗಿಯ ಬೆಲೆ ಕಡಿಮೆಯಾಗುವ ನಿರೀಕ್ಷೆಯಿರು
ವುದರಿಂದ ನಾಗರಿಕರ ಮುಖದಲ್ಲಿ ಮಂದಹಾಸ ಮೂಡಿದೆ.

ಬಡವರ ಆಹಾರ ರಾಗಿ, ಇದೀಗ ಸಿರಿವಂತರ ಮನೆಯನ್ನೂ ಸೇರಿದೆ. ರಾಗಿ ಬೇಸಾಯ ಉಳಿದ ಬೆಳೆಗಳ ಬೇಸಾಯಕ್ಕಿಂತ ವಿಭಿನ್ನ. ತುಸು ಶ್ರಮದಾಯಕ. ಆದ್ದರಿಂದ ರಾಗಿ ಬೇಸಾಯ, ಮನೆ ಮಂದಿಯೆಲ್ಲ ಸಾಯ ಎಂಬ ಮಾತು ಒಕ್ಕಲ ಮಕ್ಕಳ ಆಡು ಭಾಷೆಯಲ್ಲಿ ಈಗಲೂ ಜೀವಂತವಾಗಿದೆ.

ಮದುವೆಗಳು ಸೇರಿದಂತೆ ಬಹುತೇಕ ಕಾರ್ಯಕ್ರಮಗಳಲ್ಲಿ ರಾಗಿ ಮುದ್ದೆಯನ್ನು ಪ್ರಮುಖ ಆಹಾರವಾಗಿ ಬಳಕೆ ಮಾಡುತ್ತಿರುವುದರಿಂದ ರಾಗಿಯ ಬೆಲೆ ಕ್ವಿಂಟಾಲ್ ಗೆ ₹ 2,800 ರಿಂದ ₹ 3,000ವರೆಗೂ ಗಣನೀಯವಾಗಿ ಏರಿಕೆಯಾಗಿದ್ದು ಉತ್ತಮ ಬೆಳೆಗಳಾಗಿ ರುವುದರಿಂದ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದೆ.

ADVERTISEMENT

ಬರಗಾಲದಿಂದಾಗಿ ಕೆರೆ, ಕುಂಟೆಗಳಲ್ಲಿ ನೀರಿಲ್ಲದೆ ಸೊರಗಿ ಹೋಗಿದ್ದ ರೈತರು, ಆಗಸ್ಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಬಿದ್ದ ಮಳೆಯಿಂದಾಗಿ ಹಲವು ಕೆರೆಗಳು ಭರ್ತಿಯಾಗಿದ್ದು,ಈ ಬಾರಿ ಉತ್ತಮವಾಗಿ ಬಿತ್ತನೆ ಕಾರ್ಯವಾಗಿತ್ತು. ಕೃಷಿ ಇಲಾಖೆಯಿಂದ ವಿತರಣೆ ಮಾಡಿದ್ದ ದೀರ್ಘಾವಧಿ ತಳಿಗಳಾದ ಎಂಆರ್- 1, ಎಂಆರ್-6, ಕೆಎಂಆರ್- 301, ರಾಗಿಯನ್ನು ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದರು.

ಒಂದು ಹೆಕ್ಟೇರ್‌ಗೆ 35ರಿಂದ 40 ಕ್ವಿಂಟಾಲ್, ನೀರಾವರಿ ಆಸರೆಯಲ್ಲಿ 40 ರಿಂದ 45 ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆಯಿದೆ ಎಂದು ರೈತ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಅಧಿಕ ಇಳುವರಿ ನೀಡುವ ಅತ್ಯುನ್ನತ ತಳಿಗಳು. ಹೊಲಗಳಲ್ಲಿ ಬೆಳೆದಿರುವ ರಾಗಿಯ ತೆನೆಗಳು ಮೈದುಂಬಿಕೊಂಡಿದ್ದು, ಆಹಾರ, ಮತ್ತು ರಾಸುಗಳ ಮೇವುಗಳ ಕೊರತೆ ನೀಗಿಸಲು ಅನುಕೂಲವಾಗಲಿದೆ, ಕೃಷಿ ಇಲಾಖೆಯಿಂದ ವಿತರಣೆ ಮಾಡಿರುವ ಬಿತ್ತನೆ ಬೀಜಗಳ ಪಾಕೇಟ್ ಮೇಲೆ ಮುದ್ರಿತವಾಗಿರುವ ತಳಿಗಳ ಬದಲಿಗೆ ಬೇರೆ ಬಿತ್ತನೆ ಬೀಜ ಸಿಕ್ಕಿದ್ದರಿಂದ ಕೆಲವು ಕಡೆಗಳಲ್ಲಿ ಬೆಳೆಗಳು ಇಳುವರಿ ಕಳೆದುಕೊಂಡಿವೆ ಎಂದು ರೈತ ಜಯರಾಮ್ ತಿಳಿಸಿದ್ದಾರೆ.

ನೀರಿಗಾಗಿ ಕೊಳವೆಬಾವಿಗಳನ್ನೆ ಅಲಂಬಿಸಿರುವ ರೈತರ ಬಹುತೇಕ ಕೊಳವೆಬಾವಿಗಳು ನೀರಿಲ್ಲದೆ ಬತ್ತಿಹೋಗಿದ್ದವು. ಕೆರೆಗಳಿಗೆ ನೀರು ಬಂದಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬತ್ತಿಹೋಗಿದ್ದ ಕೊಳವೆಬಾವಿಗಳಲ್ಲಿ ನೀರು ಕಾಣಿಸಿಕೊಂಡಿರುವುದು ರೈತರಲ್ಲಿ ಸಂತಸ ಮೂಡಿದೆ. ಹಿಂದಿನ ಬಿತ್ತನೆಗಳಾಗಿರುವ ಹೊಲಗಳಿಗೆ ನೀರಿನ ಅವಶ್ಯಕತೆ ಇದೆ ಎಂದು ರೈತ ಶಾಮಣ್ಣ ತಿಳಿಸಿದ್ದಾರೆ.

* * 

ಈ ಬಾರಿ ಶೇ 100 ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ಬಹುತೇಕ ಕಡೆಗಳಲ್ಲಿ ಉತ್ತಮವಾಗಿ ರಾಗಿ ಬೆಳೆಯಾಗಿದೆ. ಮಧ್ಯದಲ್ಲಿ ಹುಳುಕಾಟ ಆಗಿದ್ದು ಬಿಟ್ಟರೆ ಬೇರೆ ಏನೂ ಸಮಸ್ಯೆಯಾಗಿಲ್ಲ.
ಮೈತ್ರಿ, ಕೃಷಿ ಅಧಿಕಾರಿ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.