ADVERTISEMENT

ರೈತರ ಸಮಸ್ಯೆ ವಿಚಾರ– ಸರ್ಕಾರ ವಿಫಲ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 10:55 IST
Last Updated 22 ಜುಲೈ 2017, 10:55 IST

ದೇವನಹಳ್ಳಿ: ಬಾಗಲಕೋಟೆ ಜಿಲ್ಲೆ ಬನಹಟ್ಟಿ ತಾಲ್ಲೂಕಿನಲ್ಲಿ ನಡೆಯಲಿರುವ ಹುತಾತ್ಮ ರೈತರ ದಿನಾಚರಣೆ ಮತ್ತು ರೈತರ ರಾಜ್ಯ ಮಟ್ಟದ ಸಮಾವೇಶಕ್ಕೆ ದೇವನಹಳ್ಳಿ ರೈತರು ಗುರುವಾರ ರಾತ್ರಿ ತೆರಳಿದರು. ರೈತ ಸಂಘ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ರೈತರ ಹೆಸರು ಹೇಳಿಕೊಂಡು ಎಲ್ಲಾ ರಾಜಕೀಯ ಪಕ್ಷಗಳು ಮತ ಪಡೆದು ಆಡಳಿತ ನಡೆಸುತ್ತವೆ. ರೈತರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗುತ್ತಿವೆ ಎಂದು ದೂರಿದರು.

ಕೇಂದ್ರ ಸರ್ಕಾರ ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ಟಿ ಸಾಲ ಮನ್ನಾ ಮಾಡುತ್ತದೆ. ರೈತರ  ಕನಿಷ್ಠ ಒಂದೆರಡು ಲಕ್ಷ ಸಾಲ ಮನ್ನಾಕ್ಕೆ ಹಿಂದೇಟು ಹಾಕುತ್ತದೆ ಎಂದು ಆಕ್ಷೇಪಿಸಿದರು. ಸರ್ಕಾರ ಸಾಲ ಮನ್ನಾ ಮಾಡುವುದು ಬೇಡ. ವ್ಯರ್ಥವಾಗಿ ಹರಿಯುವ ನೀರನ್ನು ಬಳಕೆ ಮಾಡಕೊಂಡು ಸಮಗ್ರ ಶಾಶ್ವತ ನೀರಾವರಿ ಯೋಜನೆಗೆ ಮುಂದಾಗಲಿ ಎಂದು ಒತ್ತಾಯಿಸಿದರು.

ಮಹದಾಯಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಕೇವಲ ಪತ್ರದ ಮೂಲಕ ಸಂಧಾನಕ್ಕೆ ಒತ್ತಾಯಿಸುತ್ತಿದೆಯೇ ಹೊರತು ಇಚ್ಛಾಶಕ್ತಿಯಿಂದ ಸಮಸ್ಯೆ ಬಗೆ ಹರಿಸುವ ದಿಟ್ಟ ಪ್ರಯತ್ನ ಮಾಡಿಲ್ಲ. ಎರಡು ವರ್ಷದಲ್ಲಿ ಎತ್ತಿನ ಹೊಳೆ ಯೋಜನೆಯಿಂದ ಬಯಲು ಸೀಮೆಗೆ ನೀರು ಹರಿಸುವುದಾಗಿ ಹೇಳಿದ ಸರ್ಕಾರ ಗುದ್ದಲಿ ಪೂಜೆಯಾಗಿ ನಾಲ್ಕು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದರು.

ADVERTISEMENT

ಬೆಂಗಳೂರು ನಗರದಿಂದ ತ್ಯಾಜ್ಯ ಸಂಸ್ಕರಿಸಿದ ನೀರು ಪೈಪ್ ಲೈನ್ ಮೂಲಕ ದೇವನಹಳ್ಳಿ, ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸಲು ಅಂದಾಜು ₹900 ಕೋಟಿ ವೆಚ್ಚದಲ್ಲಿ ಮುಖ್ಯಮಂತ್ರಿ ಶುಂಕುಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. 18 ತಿಂಗಳಲ್ಲಿ ಯೋಜನೆ ಪೂರ್ಣಗಳ್ಳಿಲಿದೆ  ಎಂಬ ಮಾಹಿತಿ ಇದೆ. ಇದು ಸಾಧ್ಯನಾ ಎಂದರು.

ತಾಲ್ಲೂಕಿನ ಯಾವುದೇ ಕೆರೆಯಲ್ಲಿ ಈವರೆವಿಗೂ ಹೂಳು ಎತ್ತಿಲ್ಲ. ಒತ್ತುವರಿ ತೆರವುಗೊಳಿಸಿಲ್ಲ. ಕೆರೆಯಂಗಳ ಅಳತೆ ಮಾಡಿ ಹದ್ದುಬಸ್ತು ಮಾಡಿಲ್ಲ. ಸರ್ಕಾರ ಜನರಿಗೆ ಪೊಳ್ಳು ಭರವಸೆ ನೀಡುತ್ತಿದೆ ಎಂದು ಆರೋಪಿಸಿದರು.

ರೈತ ಸಂಘ ಕಾರ್ಯದರ್ಶಿ ಸೋಣ್ಣೇಗೌಡ, ಬೊಮ್ಮವಾರ ಘಟಕ ಅಧ್ಯಕ್ಷ ಪಿ.ರಾಜಣ್ಣ, ಉಪಾಧ್ಯಕ್ಷ ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಚಿಕ್ಕಾಂಜಿನಪ್ಪ, ಕಾರ್ಯದರ್ಶಿ ನವೀನ್, ಹೇಮಂತ್‌ಗೌಡ, ಖಜಾಂಚಿ ರಾಘವೇಂದ್ರ ,ರೈತ ಮುಖಂಡ ಮುದ್ದನಾಯಕನಹಳ್ಳಿ ರಮೇಶ್, ಜಗನ್ನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.