ADVERTISEMENT

ವಾರ್ಡ್ ಮಾನ್ಯತೆಗಾಗಿ ಶೇವಿಂಗ್ ಮಾಡಿಸಲ್ಲ: ಪುರಸಭೆ ಸದಸ್ಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 11:02 IST
Last Updated 4 ಜುಲೈ 2017, 11:02 IST

ವಿಜಯಪುರ: ‘ತಮ್ಮ ವಾರ್ಡನ್ನು ಪುರಸಭೆಯವರು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ. ವಾರ್ಡಿಗೆ ಪೈಪ್ ಲೈನ್ ಮೂಲಕ ಸಮರ್ಪಕವಾಗಿ ನೀರು ಕೊಡುವವರೆಗೂ ಶೇವಿಂಗ್ ಮಾಡಿಸದೆ ವಿಶಿಷ್ಟವಾಗಿ ಹೋರಾಟ ಮಾಡುತ್ತೇನೆ’ ಎಂದು 10 ನೇ ವಾರ್ಡಿನ ಸದಸ್ಯ ವರದರಾಜು ತಿಳಿಸಿದ್ದಾರೆ.

ಇಲ್ಲಿ ಮಾತನಾಡಿದ ಅವರು, ‘ವಿವಿಧ ಬಗೆಯಲ್ಲಿ ಹೋರಾಟ ಮಾಡುತ್ತಿದ್ದೇನೆ. ಪುರಸಭೆಯಲ್ಲಿ ಆಯೋಜಿಸುವ ಸಾಮಾನ್ಯ ಸಭೆಯಲ್ಲಿ ನೀರು ಕುಡಿಯದೇ ಪ್ರತಿಭಟನೆ ಮಾಡಿದ್ದೇನೆ’ ಎಂದರು.

‘ಆರು ತಿಂಗಳ ಕಾಲ ಪುರಸಭೆಗೆ ಕಾಲಿಡದೆ ಹೋರಾಡಿದ್ದೇನೆ. ಹಳೆಯ ಪುರಸಭಾ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ಮಾಡಿದ್ದೇನೆ. ಆದರೂ ನನ್ನ ಹೋರಾಟಕ್ಕೆ ಕಿಂಚಿತ್ತೂ ಬೆಲೆ ಕೊಡುತ್ತಿಲ್ಲ’ ಎಂದರು.

ADVERTISEMENT

‘ವಾರ್ಡಿನ ಜನತೆಗೆ ಬೇಕಾಗಿದ್ದ ಕೊಳವೆಬಾವಿಯಲ್ಲಿನ ನೀರನ್ನು ಬಸ್ ನಿಲ್ದಾಣದಲ್ಲಿನ ಹೋಟೆಲ್‌ ಮತ್ತು ಶೌಚಾಲಯಗಳ ಉಪಯೋಗಕ್ಕೆ ನೀಡಿ ಜನರನ್ನು ಕಡೆಗಣಿಸಿದ್ದಾರೆ. ಚರಂಡಿ  ಸ್ವಚ್ಛ ಮಾಡುತ್ತಿಲ್ಲ, ನನ್ನನ್ನು ಆಯ್ಕೆ ಮಾಡಿದ ಜನರಿಗೆ ನ್ಯಾಯ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪುರಸಭಾ ಮುಖ್ಯಾಧಿಕಾರಿಗೆ ಮನವಿ ಮಾಡಿ, ವಾರ್ಡಿನಲ್ಲಿರುವ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರು ನೋಡೋಣವೆಂಬ ಹಾರಿಕೆ ಉತ್ತರ ನೀಡಿ ಕಡೆಗಣಿಸಿದ್ದಾರೆ. ನಾನು ಪಕ್ಷೇತರನಾಗಿ ಆಯ್ಕೆಯಾಗಿರುವ ಸದಸ್ಯನೆಂಬ ಕಾರಣಕ್ಕಾಗಿ ಕಡೆಗಣಿಸಲಾಗುತ್ತಿದೆ’ ಎಂದರು. ‘ಕೂಡಲೇ ನ್ಯಾಯ ಒದಗಿಸದಿದ್ದರೆ ಪುರಸಭೆಯ ಮುಂಭಾಗದಲ್ಲಿ ವಾರ್ಡಿನ ಜನರೊಂದಿಗೆ ಹೋರಾಟ ಆರಂಭಿಸುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.