ದೇವನಹಳ್ಳಿ: ಅಂಗವಿಕಲ ಮಕ್ಕಳ ವೈದ್ಯ ಕೀಯ ಮೌಲ್ಯಮಾಪನದ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ತಿಳಿಸಿದರು.
ದೇವನಹಳ್ಳಿಯ ಗುರುಭವನದಲ್ಲಿ ಸಾರ್ವಜನಿಕ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ನಡೆದ ಅಂಗವಿಕಲ ಮಕ್ಕಳ ವೈದ್ಯಕೀಯ ಮೌಲ್ಯ ಮಾಪನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲತೆಗೆ ಜನ್ಮ ತಳೆದ ದಿನದಿಂದಲೇ ವೈದ್ಯಕೀಯ ಚಿಕಿತ್ಸೆ ನೀಡಿ ಹಂತಹಂತದ ದೈಹಿಕ ಬೆಳವಣಿಗೆಯಿಂದ ವಿಕಲತೆ ನಿವಾರಣೆ ಸಾಧ್ಯತೆ ಇದೆ. ಅಂಗವಿಕಲರ ಬಗ್ಗೆ ಪೋಷಕರೊಂದಿಗೆ ನೆರೆಹೊರೆಯವರು ಸಹಕರಿಸಬೇಕು ಎಂದರು. ಅಂಗವಿಕಲರಲ್ಲಿ ನೈತಿಕ ಸ್ಥೈರ್ಯ ತುಂಬಿ ಸಮಾಜ ಮುಖಿಯನ್ನಾಗಿಸುವ ಗುರುತರ ಜವಾಬ್ದಾರಿ ಎಲ್ಲರದ್ದು ಆಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರಾಜು ಮಾತನಾಡಿ, ಶಿಕ್ಷಣ ಇಲಾಖೆಯಿಂದ ಎಂಟು ವರ್ಗಗಳನ್ನಾಗಿ ಅಂಗವಿಕಲ ಮಕ್ಕಳನ್ನು ವಿಂಗಡಿಸಲಾಗಿದೆ. ದೈಹಿಕ ಮಾನಸಿಕ ನ್ಯೂನತೆಗೆ ಅನುಗುಣವಾಗಿ ವೈದ್ಯರಿಂದ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ವಿಶೇಷ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ ಎಂದು ಅವರು ಹೇಳಿದರು.
ಜಿ.ಪಂ ಸದಸ್ಯೆ ರಾಧಮ್ಮ ಮುನಿರಾಜು, ತಾ.ಪಂ ಉಪಾಧ್ಯಕ್ಷೆ ನಂದಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಗೋಪಾಲಸ್ವಾಮಿ, ತಾಲ್ಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಸುರೇಶ್ ಅಯ್ಯರ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗೇಶ್, ತಾಲ್ಲೂಕು ವೈದ್ಯಾಧಿಕಾರಿ ರಮೇಶ್ ಇದ್ದರು.
ದೃಢೀಕರಣ ಪ್ರಮಾಣಪತ್ರ ಕಡ್ಡಾಯ
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷಣ್ಗೌಡ ಮಾತನಾಡಿ, ಸರ್ಕಾರ ಅಂಗವಿಕಲರಿಗೆ ವಿವಿಧ ಸೌಲಭ್ಯ ನೀಡುತ್ತಿದ್ದು, ವಸತಿ ಯೋಜನೆ ವಿವಿಧ ರೀತಿಯ ಅನುದಾನದಲ್ಲಿ ಶೇ 3 ರಷ್ಟು ಮಿಸಲಾತಿ ಇದೆ ಎಂದರು.
ವಿವಿಧ ಸಲಕರಣೆ, ತ್ರಿಚಕ್ರ ಸೈಕಲ್ ಮತ್ತು ತ್ರಿಚಕ್ರ ವಾಹನ ಉಚಿತವಾಗಿ ನೀಡಲಾಗುತ್ತಿದೆ. ಅಂಗವಿಕಲತೆ ಬಗ್ಗೆ ವೈದ್ಯರಿಂದ ಧೃಢೀಕರಣ ಪ್ರಮಾಣಪತ್ರ ಪಡೆದು ಕೊಳ್ಳವುದು ಕಡ್ಡಾಯ ಎಂದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.