ADVERTISEMENT

ಹಕ್ಕೊತ್ತಾಯಿಸಿ ನಿರ್ಣಯ ಮಂಡನೆ

ದೇವನಹಳ್ಳಿ: ಪ್ರಾಂತ ರೈತ ಸಂಘದ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 9:07 IST
Last Updated 30 ಮಾರ್ಚ್ 2015, 9:07 IST

ದೇವನಹಳ್ಳಿ:  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅಧ್ಯಕ್ಷತೆಯಲ್ಲಿ ಪ್ರಾಂತ ರೈತ ಸಂಘದ ಮುಖಂಡರ ಸಮ್ಮುಖದಲ್ಲಿ ಹಕ್ಕೋತ್ತಾಯಿಸಿ ನಿರ್ಣಯ ಮಂಡಿಸಲಾಯಿತು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಇಲ್ಲಿಯವರೆಗೂ ಆಡಳಿತ ನಡೆಸಿದ ಸರ್ಕಾರಗಳು ದಲಿತರು, ವಿಧೆಯರು, ಬಡಕೃಷಿ ಕಾರ್ಮಿಕರಿಗೆ ಕನಿಷ್ಠ  ಬದುಕು ರೂಪಿಸಿಕೊಳ್ಳಲು ನಿವೇಶನ ಹಾಗೂ ವಸತಿ ಕೊಟ್ಟಿಲ್ಲ. ಕೇರಳ ಇ.ಎಂ.ಎಸ್. ನಂಬೂದರಿ ಪಾಡ್ ಸರ್ಕಾರದ ಮಾದರಿಯಲ್ಲಿ ಕನಿಷ್ಠ ಪ್ರತಿ ಕುಟುಂಬಕ್ಕೆ ಐದು ಗುಂಟೆ ಭೂಮಿ ನೀಡಿ ಮನೆಕಟ್ಟಿಕೊಳ್ಳಲು ಶೇಕಡ 75 ರಷ್ಟು ಸಹಾಯಧನ ಬಡ್ಡಿರಹಿತವಾಗಿ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

‘ಬಹುರಾಷ್ಟ್ರೀಯ ಕಂಪೆನಿಗಳ ಪರವಾದ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಕೈಬಿಡಬೇಕು. ರೈತ ಒಪ್ಪಿಗೆ ಇಲ್ಲದೆ ಪರಿಸರ ಮತ್ತು ಸಾಮಾಜಿಕ ಪರಿಣಾಮದ ಸಮಗ್ರ ವರದಿಯ ಪ್ರಸ್ತಾಪವಿಲ್ಲದೆ ಕೇಂದ್ರ ಜಾರಿಗೊಳಿಸಲು ಮುಂದಾಗಿರುವ ಕ್ರಮದ ಬಗ್ಗೆ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕು’ ಎಂದರು.

ಪ್ರಾಂತ ರೈತ ಸಂಘ್ ಅಧ್ಯಕ್ಷ ವೀರಣ್ಣ ಮಾತನಾಡಿ, ‘ಸರ್ಕಾರಿ ಹಾಗೂ ಆರಣ್ಯವೆನ್ನಲಾಗುತ್ತಿರುವ ಡೀಮ್ಡ್ ಫಾರೆಸ್ಟ್‌ನಲ್ಲಿ ಸಾಗುವಳಿ ನಿರತ ಹತ್ತು ಎಕರೆ ಒಳಗಿನ ಸಾಗುವಳಿದಾರರನ್ನು ನೋಟಿಸ್ ನೀಡಿ ಬಲವಂತವಾಗಿ ಒಕ್ಕಲೆಬ್ಬಿಸುವುದನ್ನು ಸರ್ಕಾರ ಕೈಬಿಡಬೇಕು. ಗೋಮಾಳ ನೀತಿಗೆ ತಿದ್ದುಪಡಿಯಾಗಬೇಕು. ಬಿ.ಬಿ.ಎಂ.ಪಿ.ಮತ್ತು ನಗರಸಭೆ ವ್ಯಾಪ್ತಿಯಲ್ಲಿ 5ರಿಂದ 18 ಕಿ.ಮೀ.ವ್ಯಾಪ್ತಿಯಲ್ಲಿ ಸಾಗುವಳಿ ಜಮೀನಿಗೆ ಹಕ್ಕುಪತ್ರ ಸಿಗುವಂತೆ ಸೂಕ್ತ ಮಾರ್ಪಡು ಆಗಬೇಕು.

ಭೂ ಮಾಫಿಯಾ ಕಬಳಿಸಿದ ಸರ್ಕಾರಿ ಜಮೀನು ತೆರವುಗೊಳಿಸಿ ಸರ್ಕಾರ ತನ್ನ ವಶಕ್ಕೆ ಪಡೆಯಬೇಕು. ವಿದ್ಯುತ್ ಸಮಸ್ಯೆ ನಿರ್ವರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು. ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರತೇಜಸ್ವಿ ಮಾತನಾಡಿ, ‘ಅನೇಕ ವರ್ಷಗಳಿಂದ ಕೆರೆಗಳಲ್ಲಿ ಹೂಳು ತುಂಬಿದೆ. ಅದನ್ನು ತೆಗೆಯುವ ಪ್ರಯತ್ನ ಮಾಡಿ ನೀರು ಹರಿಯುವ ಮಾರ್ಗಗಳನ್ನು ದುರಸ್ತಿ ಮಾಡಬೇಕು. ರಾಜ್ಯದ ಹತ್ತು ಜಿಲ್ಲೆ, ನಲವತ್ತು ತಾಲ್ಲೂಕು 1,576 ಗ್ರಾಮಗಳಿಗೆ ಕುಡಿಯುವ ನೀರಿಲ್ಲ. ಶಾಶ್ವತ ಯೊಜನೆಗೆ ಸರ್ಕಾರ ಒತ್ತು  ನಿಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.