ADVERTISEMENT

‘ಸಚಿವ ಸಂಪುಟದಲ್ಲಿ ಭ್ರಷ್ಟರು’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 9:07 IST
Last Updated 6 ಫೆಬ್ರುವರಿ 2018, 9:07 IST

ದೇವನಹಳ್ಳಿ: ಭ್ರಷ್ಟಾಚಾರದ ತನಿಖೆ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹತ್ತಕ್ಕಿಂತ ಹೆಚ್ಚು ಸಚಿವರು ಜೈಲಿಗೆ ಹೋಗಲಿದ್ದಾರೆ ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಆರೋಪಿಸಿದರು.

ಅಂಬೇಡ್ಕರ್‌ ಭವನದಲ್ಲಿ ಶನಿವಾರ ಜನಶಕ್ತಿ ವೇದಿಕೆ ವತಿಯಿಂದ ನೂತನ ಕಾರ್ಯಕರ್ತರ ಸೇರ್ಪಡೆ ಮತ್ತು ತ್ರೈಮಾಸಿಕ ಕಾರ್ಯ ಸೂಚಿ ಸಭೆಯಲ್ಲಿ ಅವರು ಮಾತನಾಡಿದರು. ಜನಶಕ್ತಿ ವೇದಿಕೆ ಯಾವುದೇ ರಾಜಕೀಯ ಪಕ್ಷದ ಪರವಿಲ್ಲ. ರಾಜಕೀಯಕ್ಕೂ ಪ್ರವೇಶಿಸುವುದಿಲ್ಲ. ಹೋರಾಟದ ಹಾದಿಯಲ್ಲೇ ಸಾಗಲಿದೆ ಎಂದರು.

ಮಹದಾಯಿ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ದೊಂಬರಾಟ ನಡೆಸುತ್ತಿವೆ. ಉತ್ತರ ಕರ್ನಾಟಕದ ಜನರಿಗೆ ಆಕಾಶ ತೋರಿಸಿ ಬಲಿಪಶು ಮಾಡಲಾಗುತ್ತಿದೆ. ಆ ಭಾಗದ ಜನರ ಹೋರಾಟಕ್ಕೆ ಬೆಂಬಲವಿದೆಯೇ ಹೊರತು ಬೇಷರತ್‌ ಬೆಂಗಳೂರು ನಗರ ಬಂದ್‌ಗೆ ಬೆಂಬಲವಿಲ್ಲ ಎಂದರು.

ADVERTISEMENT

₹5 ಸಾವಿರ ಕೋಟಿ ಭ್ರಷ್ಟಾಚಾರ: ರಾಜ್ಯದ ವಿವಿಧ ಇಲಾಖೆಗಳಲ್ಲಿ ₹5 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಸಮಗ್ರ ವರದಿಗಳ ದಾಖಲೆ ನೀಡಿ ಆರೇಳು ತಿಂಗಳು ಕಳೆದಿದೆ. ಮುಖ್ಯಮಂತ್ರಿ ತುಟಿ ಬಿಚ್ಚುತ್ತಿಲ್ಲ. ಸರ್ಕಾರಿ ಗೋಮಾಳ, ಖರಾಬು, ಗುಂಡುತೋಪು, ಉದ್ಯಾನದ ಜಾಗ ಒತ್ತುವರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

42 ಕಾರ್ಯಕರ್ತರು ನೂತನವಾಗಿ ಜನಶಕ್ತಿ ವೇದಿಕೆಗೆ ಸೇರ್ಪಡೆಗೊಂಡರು. ಜನಶಕ್ತಿ ವೇದಿಕೆ ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ನವೀನ್‌, ಉಪಾಧ್ಯಕ್ಷ ಪುಟ್ಟೇಗೌಡ, ರಾಜ್ಯ ಸಮಿತಿ ಸದಸ್ಯ ನಾಗೇಶ್‌, ಜಿಲ್ಲಾ ಘಟಕ ಅಧ್ಯಕ್ಷ ಹನುಮಂತರೆಡ್ಡಿ, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್‌, ತಾಲ್ಲೂಕು ಘಟಕ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷ ಗಂಗಾಧರ್‌, ಜಂಟಿ ಕಾರ್ಯದರ್ಶಿ ತುಳಸಿನಾಥ್‌, ತಾಲ್ಲೂಕು ಕಾರ್ಮಿಕ ಘಟಕ ಅಧ್ಯಕ್ಷ ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.