ADVERTISEMENT

ಬಿ.ಮುನೇಗೌಡ ಜೆಡಿಎಸ್‌ ಅಧಿಕೃತ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 8:46 IST
Last Updated 20 ಫೆಬ್ರುವರಿ 2018, 8:46 IST
ಜೆಡಿಎಸ್‌ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳಿಗೆ ಎಚ್‌.ಅಪ್ಪಯ್ಯ ಆದೇಶ ಪತ್ರಗಳನ್ನು ನೀಡಿದರು
ಜೆಡಿಎಸ್‌ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳಿಗೆ ಎಚ್‌.ಅಪ್ಪಯ್ಯ ಆದೇಶ ಪತ್ರಗಳನ್ನು ನೀಡಿದರು   

ದೊಡ್ಡಬಳ್ಳಾಪುರ: ವಿಧಾನ ಸಭಾ ಚುನಾವಣೆಗೆ ಬಿ.ಮುನೇಗೌಡರನ್ನು ಜೆಡಿಎಸ್‌ ಅಧಿಕೃತ ಅಭ್ಯರ್ಥಿಯಾಗಿ ವರಿಷ್ಠರು ಘೋಷಣೆ ಮಾಡಿದ್ದಾರೆ. ಅಭ್ಯರ್ಥಿ ಕುರಿತಂತೆ ಯಾವುದೇ ಗೊಂದಲ ಇಲ್ಲ ಎಂದು ಜೆಡಿಎಸ್‌ ತಾಲ್ಲೂಕು ಮುಖಂಡ ಓಬದೇನಹಳ್ಳಿ ಮುನಿಯಪ್ಪ ಹೇಳಿದರು. ಸೋಮವಾರ ನಗರದ ಕನ್ನಡ ಭವನದಲ್ಲಿ ನಡೆದ ಜೆಡಿಎಸ್‌ ಪರಿಶಿಷ್ಟ ವಿಭಾಗದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯರನ್ನು ನೇಮಿಸಿರುವುದಾಗಿ ವರಿಷ್ಠರು ಭರವಸೆ ನೀಡದ್ದಾರೆ ಎಂದು ಅವರು ತಿಳಿಸಿದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಲಾಗುವುದು. ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೆ ಪಕ್ಷದ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಿರುವ ಬಿ.ಮುನೇಗೌಡರಿಗೆ ಮತ ನೀಡಬೇಕು ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಬಿಎಸ್‌ಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಬೃಹತ್‌ ಸಮಾವೇಶವೇ ಸಾಕ್ಷಿಯಾಗಿದೆ. ಕ್ಷೇತ್ರದ ಮತದಾರರಲ್ಲೂ ಈ ಬಾರಿ ಜೆಡಿಎಸ್‌ ಪರವಾದ ಒಲವು ಹೆಚ್ಚಾಗಿದೆ ಎಂದರು.

‘ರಾಜ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಶೂನ್ಯವಾಗಿದೆ’ ಎಂದರು.

ಅಭಿವೃದ್ದಿಯ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಪರಿಶಿಷ್ಟ ಘಟಕದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ಪುಟ್ಟಬಸವರಾಜ್‌, ತಾಲ್ಲೂಕು ಪರಿಶಿಷ್ಟ ಘಟಕದ ಅಧ್ಯಕ್ಷ ಆನಂದ್‌, ನಗರ ಘಟಕದ ಅಧ್ಯಕ್ಷ ತಳವಾರ್‌ ನಾಗರಾಜ್‌, ಮಹಿಳಾ ಘಟಕದ ಅಧ್ಯಕ್ಷೆ ಗಜಲಕ್ಷ್ಮೀ, ಟಿಎಪಿಎಂಸಿಎಸ್‌ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ, ನಿರ್ದೇಶಕ ಕೆ.ಸಿ.ಲಕ್ಷ್ಮೀನಾರಾಯಣ್‌, ಪರಿಶಿಷ್ಟ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಹರ್ಷ, ನಗರಸಭೆ ಸದಸ್ಯ ಎಂ.ಮಲ್ಲೇಶ್‌, ಮುಖಂಡರಾದ ನಾರಾಯಣಪ್ಪ, ಕುಂಟನಹಳ್ಳಿ ಮಂಜುನಾಥ್‌, ಚೌಡರಾಜ್‌, ಶಾಮ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.