ಅಥಣಿ : ವಿಜಯಪುರದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಪಟ್ಟಣದ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ, ದಲಿತ ಸಂಘರ್ಷ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಛಲವಾದಿ ಮಹಾಸಭಾ, ಎಸ್ಸಿ ಮತ್ತು ಎಸ್ಟಿ ನ್ಯಾಯವಾದಿಗಳ ಬಳಗ, ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘ, ಕರವೇ, ಬಿ.ಎಸ್.ಪಿ, ರೈತಸಂಘ, ಎಸ್ಸಿ ಮತ್ತು ಎಸ್ಟಿ ನೌಕರರ ಸಂಘಟನೆಗಳು ಬಂದಗೆ ಕರೆ ನೀಡಿದ್ದವು.
ಈ ವೇಳೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡ ಸಿದ್ಧಾರ್ಥ ಸಿಂಗೆ ಮಾತನಾಡಿ, ಇಂತಹ ಅಮಾನವೀಯ ಕೃತ್ಯಗಳು ನಡೆಯದಂತೆ ತಡೆಯುವುದು ಸರ್ಕಾರ ಕರ್ತವ್ಯವಾಗಿದೆ.
ಈ ಪ್ರಕರಣದಲ್ಲಿ ಸಂಘ ಪರಿವಾರವು ಮೌನ ವಹಿಸಿರುವದು ‘ದಲಿತರು ಹಿಂದುಗಳಲ್ಲ ’ಎಂಬುದನ್ನು ಸಾಬಿತು ಪಡಿಸುತ್ತದೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾವಣೆ ಮಾಡಲು ಪ್ರಯತ್ನಿಸುತ್ತಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಖಂಡಿಸಿದರು.
ಆರೋಪಿಗಳಿಗೆ ಉಗ್ರವಾದ ಶಿಕ್ಷೆಯನ್ನು ನೀಡಬೇಕು. ಈ ಅಮಾನೀಯ ಕೃತ್ಯವು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ವಿವಿಧ ಸಂಘಟನೆಗಳ ಮುಖಂಡರುಗಳಾದ ಚಿದಾನಂದ ತಳಕೇರಿ, ರಾಜೇಂದ್ರ ಐಹೊಳೆ, ಮಿತೇಶ ಪಟ್ಟಣ, ಬಸವರಾಜ ಕಾಂಬಳೆ, ಸುನೀಲ ವಾಘಮೊರೆ, ಸಂಜು ಕಾಂಬಳೆ, ಮಹಾದೇವ ಮಡಿವಾಳ, ಅಣ್ಣಾಸಾಬ ತೆಲಸಂಗ ಆರೋಪಿಸಿದರು.
ಬಂದ್ನಿಂದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು. ಬಸ್ ಸಂಚಾರ ವಿರಳವಾಗಿತ್ತು. ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಸಿ.ಪಿ.ಐ. ಎಚ್ ಶೇಖರಪ್ಪ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.