ಬೆಳಗಾವಿ: ಸಹಕಾರ ಬ್ಯಾಂಕುಗಳಿಗೆ ಶೇ 25ರಷ್ಟು ಮಾತ್ರವೇ ಆದಾಯ ತೆರಿಗೆ ಅನ್ವಯಿಸುವಂತೆ ಆಗ್ರಹಿಸಿ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್ಗಳ ಸಂಘದಿಂದ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರಿಗೆ ನವದೆಹಲಿಯಲ್ಲಿ ಈಚೆಗೆ ಮನವಿ ಸಲ್ಲಿಸಲಾಯಿತು.
‘ಕೇಂದ್ರ ಬಜೆಟ್ಗೆ ಅನುಮೋದನೆ ಪಡೆಯುವ ಪೂರ್ವದಲ್ಲಿಯೇ ಈ ಕ್ರಮ ಕೈಗೊಳ್ಳಬೇಕು’ ಎಂದು ಸಂಸದರಾದ ಸುರೇಶ ಅಂಗಡಿ, ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಪಟ್ಟಣ ಸಹಕಾರಿ ಬ್ಯಾಂಕುಗಳ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
‘ಪ್ರಸ್ತುತ ಸಹಕಾರ ಬ್ಯಾಂಕುಗಳಿಗೆ ಶೇ 30ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಶೇ 25ಕ್ಕೆ ಇಳಿಸಬೇಕು. ಲಘು ಹಾಗೂ ಮಧ್ಯಮ ಉದ್ಯಮಗಳಂತೆಯೇ ಶೇ 25ರಷ್ಟು ಮಾತ್ರವೇ ಪಡೆಯಬೇಕು. ಪಟ್ಟಣ ಮತ್ತು ಉಪನಗರಗಳ ಹಂತದಲ್ಲಿ ಪ್ರಗತಿ ಪಥದಲ್ಲಿರುವ ಸಹಕಾರಿ ಬ್ಯಾಂಕುಗಳಿಗೆ ಆದಾಯ ತೆರಿಗೆಯ ಭಾರವನ್ನು ಕಡಿಮೆ ಮಾಡಬೇಕು.
ಮಧ್ಯಮ ಮತ್ತು ಕೆಳವರ್ಗದ ಕ್ಷೇತ್ರವನ್ನು ಆರ್ಥಿಕವಾಗಿ ಬಲಪಡಿಸಲು ಸಹಕಾರಿ ಬ್ಯಾಂಕುಗಳು ವಹಿಸುತ್ತಿರುವ ಪಾತ್ರವನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಬೇಕು’ ಎಂದು ಕೋರಲಾಯಿತು ಎಂದು ಜಿಲ್ಲಾ ಸಹಕಾರ ಬ್ಯಾಂಕ್ಗಳ ಸಂಘದ ಅಧ್ಯಕ್ಷ ಬಾಳಪ್ಪ ಕಗ್ಗಣಗಿ ತಿಳಿಸಿದರು.
ಕೇಂದ್ರ ಸಚಿವ ಅಶೋಕ ಲವಾಸ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಎನ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.
ಸಂಘದ ಪದಾಧಿಕಾರಿಗಳಾದ ಬಾಳಾಸಾಹೇಬ ಕಾಕತಕರ, ಚಂದ್ರಕಾಂತ ಗುಂಡಕಲ್, ಮರಾಠಾ ಬ್ಯಾಂಕ ನಿರ್ದೇಶಕ ಲಕ್ಷ್ಮಣ ಹೊನಗೇಕರ, ಪ್ರಧಾನ ವ್ಯವಸ್ಥಾಪಕ ರವಿಕಿರಣ ಧುರಾಜಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಅಂಗಡಿ, ದೈವಜ್ಞ ಬ್ಯಾಂಕ್ ಅಧ್ಯಕ್ಷ ಎಸ್.ಎಂ. ರೇವಣಕರ, ಪ್ರಧಾನ ವ್ಯವಸ್ಥಾಪಕ ಪಿ.ಎಸ್. ಸೇಠ, ಶಾಂತಪ್ಪಾಣ್ಣ ಮಿರ್ಜಿ ಬ್ಯಾಂಕ್ ಅಧ್ಯಕ್ಷ ಅಶೋಕ ದಾನವಾಡೆ ಹಾಗೂ ಪ್ರಧಾನ ವ್ಯವಸ್ಥಾಪಕ ಭೋಜಕರ ನಿಯೋಗದಲ್ಲಿದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.