ADVERTISEMENT

ಕಸ ಎಸೆದು ಪ್ರತಿಭಟಿಸಿದ ಗ್ರಾಮಸ್ಥರು

ಹಲಕರ್ಣಿ ಗ್ರಾಮದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:46 IST
Last Updated 14 ಮಾರ್ಚ್ 2017, 6:46 IST
ಖಾನಾಪುರ ಸಮೀಪದ ಹಲಕರ್ಣಿ ಗ್ರಾಮ ಪಂಚಾಯ್ತಿ ಮುಂದೆ ಕಸ ಎಸೆದು ಗಾಂಧಿನಗರ ಬಡಾವಣೆಯ ನಾಗರಿಕರು ಪ್ರತಿಭಟನೆ ಕೈಗೊಂಡರು
ಖಾನಾಪುರ ಸಮೀಪದ ಹಲಕರ್ಣಿ ಗ್ರಾಮ ಪಂಚಾಯ್ತಿ ಮುಂದೆ ಕಸ ಎಸೆದು ಗಾಂಧಿನಗರ ಬಡಾವಣೆಯ ನಾಗರಿಕರು ಪ್ರತಿಭಟನೆ ಕೈಗೊಂಡರು   

ಖಾನಾಪುರ: ಪಟ್ಟಣದ ಹೊರವಲಯದ ಗಾಂಧಿನಗರ ಬಡಾವಣೆಯ ನಾಗರಿಕರು ತಮ್ಮ ವ್ಯಾಪ್ತಿಯ ಹಲಕರ್ಣಿ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ತಮ್ಮ ಬಡಾವಣೆಯಲ್ಲಿ ಸಂಗ್ರಹಗೊಂಡಿದ್ದ ಕಸವನ್ನು ಸುರಿಯುವ ಮೂಲಕ ಸೋಮವಾರ ಗ್ರಾಮ ಪಂಚಾಯ್ತಿ ಕಸ ವಿಲೇವಾರಿ ಮಾಡದ್ದನ್ನು ಖಂಡಿಸಿ ಪ್ರತಿಭಟನೆಯನ್ನು ಕೈಗೊಂಡರು.

ಪ್ರತಿಭಟನೆಯಲ್ಲಿ ಮಾತನಾಡಿದ ಗಾಂಧಿನಗರ ನಿವಾಸಿ ಎಂ.ಜಿ ಶಿಲ್ಲೇದಾರ, ಬಡಾವಣೆಯ ಚರಂಡಿಗಳಲ್ಲಿ ಕಸ ತುಂಬಿ ರಸ್ತೆ ಮೇಲೆ ವ್ಯಾಪಿಸಿದ್ದು, ಹಂದಿಗಳು ಕಸವನ್ನು ಚೆಲ್ಲಾಪಿಲ್ಲಿ ಮಾಡಿದ್ದರಿಂದ ಕಸ ಕೊಳೆತು ದುರ್ನಾತ ಸೂಸುತ್ತಿತ್ತು. ಇದರಿಂದಾಗಿ ಬಡಾವಣೆಯಲ್ಲಿರುವ ಮಸೀದಿ, ಶಾಲೆಗಳಿಗೆ ತೆರಳುವವರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿತ್ತು.

ತಮ್ಮ ಬಡಾವಣೆಯಲ್ಲಿ ನಿತ್ಯ ಸಂಗ್ರಹಗೊಳ್ಳುವ ಕಸ ವಿಲೇವಾರಿಯ ಬಗ್ಗೆ ಹಲವು ಬಾರಿ ಬಡಾವಣೆಯ ನಾಗರಿಕರು ಗ್ರಾಮ ಪಂಚಾಯ್ತಿಯ ಸದಸ್ಯರು, ಸಿಬ್ಬಂದಿ ಹಾಗೂ ಪಿಡಿಒ ಅವರ ಗಮನಕ್ಕೆ ತಂದಿದ್ದರು.

ಆದರೂ ಗ್ರಾಮ ಪಂಚಾಯ್ತಿ ಈ ಸಮಸ್ಯೆ ಬಗೆಹರಿಸುವಲ್ಲಿ ಗಮನ ಹರಿಸದ ಕಾರಣ ಬಡಾವಣೆಯ ನಾಗರಿಕರೆಲ್ಲ ಸೇರಿ ಕಸವನ್ನು ಸಂಗ್ರಹಿಸಿ ಪಂಚಾಯ್ತಿ ಕಚೇರಿಯ ಮುಂದೆ ಎಸೆದು ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.

ಸುದ್ದಿ ತಿಳಿದು ಪಂಚಾಯ್ತಿಗೆ ಭೇಟಿ ನೀಡಿದ ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಖಾನಾಪುರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರ ಪುತ್ರ ಶಾನೂರ ಸಿಂಗಾಡೆ ಹಾಗೂ ಇತರರು ಸಮಸ್ಯೆ ಇತ್ಯರ್ಥಕ್ಕಾಗಿ ಗ್ರಾಮ ಪಂಚಾಯ್ತಿ ಪಿಡಿಒ ಸೋಮಶೇಖರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪಿಡಿಒ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಕಸ ಸುರಿದು ಒಂದು ಗಂಟೆ ಕಳೆದರೂ ಪಂಚಾಯ್ತಿಯತ್ತ ಸುಳಿಯದ ಪಿಡಿಒ ಅವರ ವಿರುದ್ಧ ಆಕ್ರೋಶಗೊಂಡ ಪ್ರತಿಭಟನಾಕಾರರು ತಮ್ಮ ಸಮಸ್ಯೆ ಬಗೆಹರಿಯುವವರೆಗೆ ಇದೇ ಮಾದರಿ ಯಲ್ಲಿ ನಿತ್ಯ ಕಸ ಸಂಗ್ರಹಿಸಿ ಗ್ರಾಮ ಪಂಚಾಯ್ತಿ ಮುಂದೆ ಸುರಿದು ಪ್ರತಿಭಟನೆಯನ್ನು ಮುಂದುವರಿಸುವು ದಾಗಿ ಹೇಳಿದರು. ಈ ಸಂದರ್ಭದಲ್ಲಿ ಮನೋಹರ ಕೋಲಕಾರ, ಜಾವೇದ್ ಮೊಕಾಶಿ, ಕಲ್ಲಪ್ಪ ಮೇದಾರ, ದಾದಾಭಾಯಿ ಅತ್ತಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.