ಮೋಳೆ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ರಾಜಾಪೂರ ಬ್ಯಾರೇಜ್ ಮೂಲಕ 1657 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ.ರಾಜಾಪೂರ ಜಲಾಶಯದ 31 ಬಾಗಿಲುಗಳ ಮೂಲಕ ಈ ನೀರು ಹರಿದು ಬರುತ್ತಿದ್ದು, ಈಗ ಅದು ಕೃಷ್ಣಾ ನದಿಗೆ ಮೂಲಕ ಕರ್ನಾಟಕ ಪ್ರವೇಶಿಸಿದೆ. ಭಾನುವಾರ ಸಂಜೆಗೆ ಕುಡಚಿ ಸೇತುವೆ ತಲುಪಲಿದೆ. ಬುಧವಾರ ಸಂಜೆಗೆ ಹಿಪ್ಪರಗಿ ಆಣೆಕಟ್ಟೆಗೆ ತಲುಪಲಿವೆ ಎಂದು ಹಿಪ್ಪರಗಿ ಆಣೆಕಟ್ಟೆಯ ಎಂಜಿನಿಯರ್ ಅರುಣಕುಮಾರ ಯಲಗುದ್ರಿ ತಿಳಿಸಿದರು.
ಕರ್ನಾಟಕದ ಬಿಜೆಪಿ ನಿಯೋ ಗದ ಇತ್ತೀಚೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣ ವೀಸ್ ಅವರಿಗೆ ಮನವಿ ಮಾಡಿತ್ತು. ಮಾನವೀಯ ದೃಷ್ಟಿ ಯಿಂದ 2.65 ಟಿ.ಎಂ.ಸಿ. ಅಡಿ ನೀರು ಬಿಡಲು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು.ಶನಿವಾರ ಮಧ್ಯಾಹ್ನ 1ಕ್ಕೆ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಬಳಿ ನೀರು ಬಂದಿದೆ ಎಂಬ ವರದಿಗಳು ಬಂದಿವೆ.
ರಾಜ್ಯದಲ್ಲಿ ಭೀಕರ ಜಲಕ್ಷಾಮ ಜನರ ಬದುಕನ್ನೆ ಹಿಂಡಿ ಹಿಪ್ಪೆ ಮಾಡಿದೆ. ಈ ಪ್ರದೇಶದ ರೈತರ ಹಾಗೂ ಜನರ ಪಾಲಿಗೆ ಜೀವನಾಡಿ ಯಾಗಿರುವ ಕೃಷ್ಣೆ ಬತ್ತಿದಾದ ಸಮಸ್ಯೆ ಹೇಳತೀರದಷ್ಟಾಗಿತ್ತು. ಜನ-ಜಾನುವಾರುಗಳಿಗೂ ಕುಡಿಯಲು ನೀರಿಲ್ಲದೇ ಸಂಕಷ್ಟದ ಸ್ಥಿತಿ ಬಂದಿದೆ.ಸಂಸದ ಪ್ರಹ್ಲಾದ ಜೋಶಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ದುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ ಅವರನ್ನು ಒಳಗೊಂಡ ಬಿಜೆಪಿ ನಿಯೋಗ ಮುಂಬೈಗೆ ತೆರಳಿತ್ತು.
ಈ ನೀರನ್ನು ಕುಡಿಯಲು ಮಾತ್ರ ಬಳಕೆಯಾಗಬೇಕು ಎಂದು ಆದೇಶ ಮಾಡಲಾಗಿದೆ. ನೀರನ್ನು ವಾಣಿಜ್ಯ ಬೆಳೆಗಳಿಗೆ ಬಳಸದಂತೆ ಹಿಪ್ಪರಗಿ ಆಣೆಕಟ್ಟೆಯವರೆಗೆ ಬರುವ ಎರಡು ಬದಿಯ ಹಳ್ಳಿಗಳ ರೈತರಿಗೆ ಸೂಚನೆ ನೀಡಲಾಗಿದೆ.ನದಿ ದಡದಲ್ಲಿಯ ರೈತರ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.