ಘಟಪ್ರಭಾ: ಕಳೆದ ನಾಲ್ಕೈದು ದಿನಗಳಿಂದ ಪಟ್ಟಣದ ಸುತ್ತ ಸುರಿಯು ತ್ತಿರುವ ಮಳೆ ರವಿವಾರೂ ಕೂಡ ಅರ್ಧ ಗಂಟೆ ಬಿರುಸಿನ ಸುರಿದು ರೈತರು ಸೇರಿದಂತೆ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪಟ್ಟಣದ ರಸ್ತೆಯ ಬದಿಗೆ ಬಿದ್ದ ತಗ್ಗು ದಿನ್ನೆಗಳ್ಲಲಿ ಮಳೆ ನೀರು ತುಂಬಿದರೆ, ಬಹುತೇಕ ಗ್ರಾಮಗಳಲ್ಲಿಯೂ ಸಹ ಅಲ್ಲಲ್ಲಿ ಸಂಪೂರ್ಣ ಕೆಸರುಮಯವಾದ ದೃಶ್ಯ ಸಾಮಾನ್ಯವಾಗಿತ್ತು.
ಪಟ್ಟಣದ ಸುತ್ತಲಿನ ಕೆರೆ ಕಟ್ಟೆ ಸೇರಿದಂತೆ ಪ್ರಮುಖವಾಗಿ ಘಟಪ್ರಭಾ ನದಿಗೆ ನೀರು ಹರಿಯುತ್ತಿದೆ. ಕಳೆದ ಎರಡು ತಿಂಗಳಿಂದ ಹಾಗೂ ಬಿತ್ತಿ ಬೆಳೆದ ಬೆಳೆಗಳಿಗೆ ಮಳೆ ಜೀವಾಮೃತ ನೀಡುತ್ತಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಯ ಅಭಾವ ಉಂಟಾಗಿ ರೈತರು ಹಾಗೂ ಜನರಿಗೆ ತೀವ್ರ ತೊಂದರೆ ಆಗಿದೆ. ಅದೂ ಅಲ್ಲದೆ ಅಂತರ್ಜಲದ ಕೊರತೆಯೂ ಉಂಟಾಗಿದ್ದು, ಇನ್ನೂ ಹೆಚ್ಚನ ಪ್ರಮಾಣದಲ್ಲಿ ಮಳೆಯಾಗಬೇಕೆಂಬ ಅಭಿಪ್ರಾಯವನ್ನು ಕೊಣ್ಣೂರಿನ ನಿಂಗಪ್ಪ ಭಜಂತ್ರಿ ವ್ಯಕ್ತಪಡಿಸಿದರು. ಸಂಜೆ 4 ಗಂಟೆಯಿಂದ ಅರ್ಧ ಗಂಟೆಯವರೆಗೆ ಮಳೆ ಸುರಿಯಿತು.
ರಸ್ತೆಯಲ್ಲಿ ನೀರು
ಮೂಡಲಗಿ: ಮೂಡಲಗಿಯಲ್ಲಿ ಕಳೆದ ಒಂದು ವಾರದಲ್ಲಿ ಎರಡುಮೂರು ಬಾರಿ ಉತ್ತಮ ಮಳೆಯಾಗಿ ಎಲ್ಲರಲ್ಲಿ ಹರ್ಷ ತಂದಿದೆ. ಶನಿವಾರ ಸಂಜೆ 7.30ರಿಂದ ಅರ್ಧ ಗಂಟೆಗೂ ಹೆಚ್ಚು ಗುಡುಗು, ಮಿಂಚುಗಳಿಂದ ಜೋರಾದ ಮಳೆಯು ಇತ್ತೀಚಿನ ದಿನಗಳಲ್ಲಿಯ ಅತ್ಯುತ್ತಮ ಮಳೆ ಎನ್ನುವಂತಿತ್ತು. ಮಳೆ ರಭಸಕ್ಕೆ ಪಟ್ಟಣದ ಪ್ರಮುಖ ರಸ್ತೆಗಳ ಮೇಲೆ ಅರ್ಧ ಅಡಿಗೂ ಹೆಚ್ಚು ನೀರು ಹರಿದರೆ, ಚರಂಡಿಗಳೆಲ್ಲ ತುಂಬಿ ಹರಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.