ADVERTISEMENT

ತೆರೆ ಮೇಲೆ ಸಾವಿತ್ರಿಬಾಯಿ ಫುಲೆ ಜೀವನಚರಿತ್ರೆ

ಚಲನಚಿತ್ರದ ಚಿತ್ರೀಕರಣಕ್ಕೆ ಚಾಲನೆ; ವಿಶಾಲ್‌ರಾಜ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 9:16 IST
Last Updated 20 ಜನವರಿ 2017, 9:16 IST
ತೆರೆ ಮೇಲೆ ಸಾವಿತ್ರಿಬಾಯಿ ಫುಲೆ ಜೀವನಚರಿತ್ರೆ
ತೆರೆ ಮೇಲೆ ಸಾವಿತ್ರಿಬಾಯಿ ಫುಲೆ ಜೀವನಚರಿತ್ರೆ   

ಬೆಳಗಾವಿ: ದೇಶದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನ ಆಧಾರಿಸಿ ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್‌ ವತಿಯಿಂದ ನಿರ್ಮಿಸುತ್ತಿರುವ ‘ಸಾವಿತ್ರಿಬಾಯಿ’ ಚಲನಚಿತ್ರದ ಚಿತ್ರೀಕರಣಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಇಲ್ಲಿನ ಲಿಂಗರಾಜ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಮುಹೂರ್ತ ಕಾರ್ಯಕ್ರಮದಲ್ಲಿ ಸಂಸದ ಸುರೇಶ ಅಂಗಡಿ ಕ್ಲಾಪ್‌ ಮಾಡುವ ಮೂಲಕ ಶುಭ ಕೋರಿದರು. ಕಾರಂಜಿಮಠದ ಸಿದ್ದರಾಮ ಸ್ವಾಮೀಜಿ ಕ್ಯಾಮೆರಾ ಗುಂಡಿ ಆನ್‌ ಮಾಡಿದರು.

ಪತ್ರಕರ್ತ ಸರಜೂ ಕಾಟ್ಕರ್‌ ಅವರ ಕಾದಂಬರಿ ಆಧರಿಸಿ ಚಲನಚಿತ್ರವನ್ನು ತೆರೆ ಮೇಲೆ ತರಲಾಗುತ್ತಿದೆ. ಚಿತ್ರಕಥೆ– ನಿರ್ದೇಶನ ವಿಶಾಲ್‌ರಾಜ್‌ ಅವರದು. ಬಸವರಾಜ ವಿ. ಭೂತಾಳಿ ನಿರ್ಮಾಣ ಮಾಡುತ್ತಿದ್ದಾರೆ. ಶಿರೀಷ ಜೋಶಿ ಸಂಭಾಷಣೆ, ಸತೀಶ ಕುಲಕರ್ಣಿ ಸಾಹಿತ್ಯ, ನಾಗರಾಜ ಅದೋನಿ ಛಾಯಾಗ್ರಹಣ, ಸಂಗೀತಾ ಕಟ್ಟಿ ಕುಲಕರ್ಣಿ ಅವರ ಸಂಗೀತ ಈ ಚಲನಚಿತ್ರಕ್ಕಿದೆ. ಸಂಕಲನ ಬಿ.ಎಸ್‌. ಕೆಂಪರಾಜ ಅವರದು. ಕಲೆ ನಾಗರಾಜ್‌ ಅವರದು. ಗಗನದೀಪ್ ಅವಳೆ, ಕೆಂಪೇಗೌಡ ಪಾಟೀಲ ಹಾಗೂ ವಿನಾಯಕ ಬೋಗಾರ್‌ ಸಹಾಯಕ ನಿರ್ದೇಶಕರಾಗಿದ್ದಾರೆ.

ಸಾವಿತ್ರಿಬಾಯಿಯಾಗಿ ತಾರಾ ಅನುರಾಧಾ ಹಾಗೂ ಜ್ಯೋತಿಬಾ ಫುಲೆಯಾಗಿ ಸುಚೇಂದ್ರಪ್ರಸಾದ್‌ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಚಿಕ್ಕೋಡಿ ಘಟಕದ ಅಧ್ಯಕ್ಷ ಶಶಿಕಾಂತ ನಾಯಿಕ, ಪತ್ರಕರ್ತ ಸರಜೂ ಕಾಟ್ಕರ್‌, ಚಲನಚಿತ್ರ ನಿರ್ಮಾಪಕ ಘನಶ್ಯಾಮ ಭಾಂಡಗೆ, ನಿರ್ದೇಶಕ ವಿಶಾಲ್‌ರಾಜ್‌. ಕಲಾವಿದರಾದ ಸುಚೇಂದ್ರಪ್ರಸಾದ್‌ ಹಾಗೂ ತಾರಾ ಅನುರಾಧಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.