ADVERTISEMENT

ನಿಮ್ಮಂಥ ನಾಡದ್ರೋಹಿಗಳು ಮತ್ಯಾರಿದ್ದಾರೆ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 6:48 IST
Last Updated 1 ಡಿಸೆಂಬರ್ 2017, 6:48 IST

ಚನ್ನಮ್ಮನ ಕಿತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕಿತ್ತೂರು ಚನ್ನಮ್ಮ ಮತ್ತು ಒನಕೆ ಓಬವ್ವ ಕುರಿತು ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿರುವ ಸಂಸದ ಪ್ರತಾಪಸಿಂಹ ಅವರನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅತೃಪ್ತಿ ವ್ಯಕ್ತಪಡಿಸಿದರು.

ಇಲ್ಲಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ‘ನಿಮ್ಮಂಥ ನಾಡದ್ರೋಹಿಗಳು ಮತ್ಯಾರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನ. 28ರ ರಾತ್ರಿ 8ಕ್ಕೆ ಪ್ರತಾಪ್‌ಸಿಂಹರ ಫೇಸ್‌ಬುಕ್‌ ಖಾತೆಯಲ್ಲಿ ರಾಣಿ ಚನ್ನಮ್ಮ ಬ್ರಿಟಿಷರ ಜೊತೆ ಮತ್ತು ಒನಕೆ ಓಬವ್ವ ಹೈದರಾಲಿ ಜೊತೆ ಮಂಚ ಹಂಚಿಕೊಂಡಿದ್ದಳು ಎಂಬ ಅವಹೇಳನಕಾರಿ ಹೇಳಿಕೆ ಇತ್ತು. ಆದರೆ ರಾತ್ರಿ 9.30ಕ್ಕೆ ಆ ಪೋಸ್ಟ್‌ ಇರಲಿಲ್ಲ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ಪ್ರತಾಪಸಿಂಹರ ಜವಾಬ್ದಾರಿ ಆಗಿತ್ತು. ಆದರೆ ಸುಮ್ಮನಿರುವುದು ಬೇಸರ ತಂದಿದೆ. ಇಂಥ ದುಷ್ಟ ಜನರನ್ನು ಬಗ್ಗು ಬಡಿಯಬೇಕಾಗಿದೆ’ ಎಂದರು.

ADVERTISEMENT

ಸಾಹಿತಿ ಯ.ರು. ಪಾಟೀಲ ಮಾತನಾಡಿ ‘ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಆಸ್ತಿ, ಕೋಟೆ ಮತ್ತು ಜೀವ ಕಳೆದುಕೊಂಡವರು ಕಿತ್ತೂರು ಜನರು ಎಂಬ ಇತಿಹಾಸ ಅರಿಯಬೇಕು. ಅಸಂಬದ್ಧ ಹೇಳಿಕೆ ನೀಡುವ ಮೂಲಕ ಇತಿಹಾಸಕ್ಕೆ ಸಂಸದರು ಅಪಚಾರವೆಸಗಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು

ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಸಯ್ಯದ್‌ ಮನ್ಸೂರ್ ಮಾತನಾಡಿದರು. ಸಂಸದ ಪ್ರತಾಪ ಸಿಂಹರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ ಅವರಿಗೆ ಈ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.