ADVERTISEMENT

ಪಾತಕಿ ರಶೀದ್‌ಗೆ ‘ಬಿಲ್ಡರ್‌ಗಳೇ ಟಾರ್ಗೆಟ್‌’!

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:55 IST
Last Updated 16 ಮೇ 2017, 6:55 IST

ಬೆಳಗಾವಿ: ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಅವಿತುಕೊಂಡಿದ್ದ ಭೂಗತ ಪಾತಕಿ ರಶೀದ್‌ ಮಲಬಾರಿ, ನಗರದ ಹಲವು ಪ್ರಮುಖ ರಿಯಲ್‌ ಎಸ್ಟೇಟ್‌ ಕಂಪೆನಿ ಮಾಲೀಕರು ಹಾಗೂ ಬಿಲ್ಡರ್‌ಗಳಿಂದ ಹಫ್ತಾ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬೆಳಗಾವಿಯ ರಿಯಲ್‌ ಎಸ್ಟೇಟ್‌ ಕ್ಷೇತ್ರ ತೀವ್ರವಾಗಿ ಬೆಳೆದಿದೆ. ಹತ್ತು ಹಲವು ಕಂಪೆನಿಗಳು ವ್ಯವಹಾರ ನಡೆಸುತ್ತಿವೆ. ಭೂಮಿಯ ಬೆಲೆ ಗಗನಕ್ಕೇರಿದ್ದು, ಭೂ ಸಂಬಂಧಿತ ವ್ಯಾಜ್ಯಗಳು ಕೂಡ ಹೆಚ್ಚಾಗಿವೆ. ಇವುಗಳನ್ನು ಇತ್ಯರ್ಥ ಪಡಿಸುವ ನೆಪದಲ್ಲಿ ರಶೀದ್‌ ರಿಯಲ್‌ ಎಸ್ಟೇಟ್‌ ಕ್ಷೇತ್ರ ಪ್ರವೇಶಿಸಿದ್ದ. ಮುಂಬೈ ಮಾದರಿಯಲ್ಲಿ ಬಿಲ್ಡರ್‌ಗಳಿಂದ ‘ಹಫ್ತಾ’ ವಸೂಲಿಗೆ ಇಳಿದಿದ್ದ. ‘ಹಫ್ತಾ’ ನೀಡದ ಬಿಲ್ಡರ್‌ಗಳನ್ನು ಅಪಹರಿಸಿ, ಹಣ ವಸೂಲು ಮಾಡುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆಳಗಾವಿ ನಂಟು ಹೇಗೆ?: ಮುಂಬೈನ ಭೂಗತ ಪಾತಕಿ ಛೋಟಾ ಶಕೀಲ್‌ ಜೊತೆ ಗುರುತಿಸಿ ಕೊಂಡಿದ್ದ ರಶೀದ್‌, ಮಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸೆರೆ ಸಿಕ್ಕಿದ್ದ. 2010–11ರಲ್ಲಿ ಮಂಗಳೂರು ಜೈಲಿನಿಂದ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದ. ಈ ಸಂದರ್ಭದಲ್ಲಿ ಕೆಲವು ‘ಸಿಮಿ’ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದ.

ADVERTISEMENT

2014ರಲ್ಲಿ ಜಾಮೀನಿನ ಮೇಲೆ ಹೊರಬಂದ ರಶೀದ್‌, ಸಿಮಿ ಉಗ್ರರ ಜೊತೆ ನಂಟು ಬೆರೆಸಲು ಪ್ರಯತ್ನಿಸಿದ. ಆದರೆ, ಇವರ್‌್ಯಾರೂ ಈತನ ಜೊತೆ ನಂಟು ಬೆಳೆಸಲಿಲ್ಲ. ಆಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಜೀರ್‌ ನದಾಫ್‌ ಜೊತೆಗೂಡಿದ್ದರು.

2008–09ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ನಜೀರ್‌, ನಂತರದ ದಿನಗಳಲ್ಲಿ ರಾಜಕೀಯದಲ್ಲಿ ತೆರೆಮರೆಗೆ ಸರಿದಿದ್ದರು. ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರು. ಸವದತ್ತಿ ತಾಲ್ಲೂಕಿನ ಅಸುಂಡಿ ಗ್ರಾಮದಲ್ಲಿರುವ ಹೊಲವನ್ನು ಮಾರಾಟ ಮಾಡಲು ಬಯಸಿದ್ದರು.

ರಶೀದ್‌ ಅವರ ಮೂಲಕ ದುಬಾರಿ ದರಕ್ಕೆ ಹೊಲ ಮಾರಾಟ ಮಾಡಲು ಪ್ರಯತ್ನ ನಡೆಸಿದರು. ತಮ್ಮ ಕೆಲಸ ಮಾಡಿಕೊಡುವವರಿಗೂ ಅದೇ ಹೊಲದ ಮನೆಯಲ್ಲಿ ವಾಸ ಮಾಡಲು ರಶೀದ್‌ನಿಗೆ ಅವಕಾಶ ನೀಡಿದ್ದರು. ರಶೀದ್‌ ಜೊತೆ ಆತನ ಎರಡನೇ ಪತ್ನಿ, ಸಂಬಂಧಿಕರು ಕೂಡ ವಾಸವಾಗಿದ್ದರು.

ರಶೀದ್‌ ಆಗಾಗ ತನ್ನ ವಾಸಸ್ಥಳವನ್ನು ಬದಲಾಯಿಸುತ್ತಿದ್ದ. ಬೆಳಗಾವಿಯ ಕೆಲವು ಮುಖಂಡರ ಮನೆಯಲ್ಲೂ ವಾಸವಾಗಿದ್ದ. ಮುಂಬೈ– ಪುಣೆಗೆ ಹೋಗಿ ಬರುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಶ್ರೀಮಂತನಾಗುವ ಕನಸು:  ನಜೀರ್‌ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವ ಕನಸು ಹೊಂದಿದ್ದರು. ಇದಕ್ಕಾಗಿ ಹಲ ವರ ಬಳಿ ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಇವರ ಸಾಲವನ್ನು ತೀರಿಸಲು ‘ಅಪಹರಣ’ದ ಕೃತ್ಯಕ್ಕೆ ಇಳಿದಿದ್ದರು ಎಂದು ಹೇಳಲಾಗುತ್ತಿದೆ. 

ಮಾಹಿತಿ ರವಾನೆ: ನಗರದಲ್ಲಿರುವ ಪ್ರಮುಖ ಬಿಲ್ಡರ್‌ಗಳು, ಉದ್ಯಮಿಗಳು ಹಾಗೂ ಶ್ರೀಮಂತರ ಸಂಪೂರ್ಣ ಮಾಹಿತಿಯನ್ನು ರಶೀದ್‌ಗೆ ತಲುಪಿಸ ಲಾಗುತ್ತಿತ್ತು. ಮುಖ್ಯವಾಗಿ ಮನೆ ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ನೀಡಲಾಗು ತ್ತಿತ್ತು. ‘ಮಾಮು’ ಹೆಸರಿನಲ್ಲಿ ದೂರ ವಾಣಿ ಕರೆ ಮಾಡಿ, ರಶೀದ್‌ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಎಂದು ಹೇಳಿವೆ.

ರಾಜಕೀಯ ನಂಟು ಸಾಧ್ಯತೆ
ಬೆಳಗಾವಿ ಮಹಾನಗರ ಪಾಲಿಕೆಯ ಮೂರು ಜನ ಸದಸ್ಯರು ಇತ್ತೀಚೆಗೆ ರಶೀದ್‌ನನ್ನು ಭೇಟಿ ಮಾಡಿದ್ದು, ಬೆಳಕಿಗೆ ಬಂದಿದೆ. ಇವರ ಮೇಲೆ ನಿಗಾ ಇರಿಸಿರುವ ಪೊಲೀಸರು, ಇವ ರನ್ನೂ ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ.

₹ 25 ಸಾವಿರ ಬಹುಮಾನ...
ಪ್ರಕರಣವನ್ನು ಭೇದಿಸಿ, ಆರು ಜನ ಆರೋಪಿಗಳನ್ನು ಬಂಧಿಸಿ ರುವ ಪೊಲೀಸ್‌ ಸಿಬ್ಬಂದಿಗೆ ₹25 ಸಾವಿರ ಬಹುಮಾನ ನೀಡಲಾಗು ವುದು ಎಂದು ಪೊಲೀಸ್‌ ಆಯುಕ್ತ ಟಿ.ಜಿ. ಕೃಷ್ಣಭಟ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.