ADVERTISEMENT

ಬೆಳಗಾವಿಯಲ್ಲಿ ‘ಕಲಾಶ್ರೀ’ಪ್ರಶಸ್ತಿ ಪ್ರದಾನ

ಬಾಲಭವನದಿಂದ ಫೆ. 7ರಿಂದ 10ರವರೆಗೆ ರಾಜ್ಯಮಟ್ಟದ ಸ್ಪರ್ಧೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:12 IST
Last Updated 19 ಜನವರಿ 2017, 6:12 IST
ಬೆಳಗಾವಿಯಲ್ಲಿ ‘ಕಲಾಶ್ರೀ’ಪ್ರಶಸ್ತಿ ಪ್ರದಾನ
ಬೆಳಗಾವಿಯಲ್ಲಿ ‘ಕಲಾಶ್ರೀ’ಪ್ರಶಸ್ತಿ ಪ್ರದಾನ   

ಬೆಳಗಾವಿ: ‘ಬಾಲಭವನದಿಂದ ಪ್ರತಿ ಭಾನ್ವಿತ ಮಕ್ಕಳಿಗೆ ನೀಡುವ ‘ಕಲಾಶ್ರೀ’ ಪ್ರಶಸ್ತಿಯ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆ ಹಾಗೂ ಪ್ರದಾನ ಸಮಾರಂಭವನ್ನು ಫೆ. 7ರಿಂದ 10ರವರೆಗೆ ನಗರದಲ್ಲಿ ಆಯೋಜಿಸಲಾಗಿದೆ’ ಎಂದು ಬಾಲ ಭವನ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ ಇಲ್ಲಿ ಬುಧವಾರ ತಿಳಿಸಿದರು.

‘ಉತ್ತರ ಕರ್ನಾಟಕದ ಮಕ್ಕಳಿಗೂ ಈ ಪ್ರಶಸ್ತಿಯ ಅರಿವು ಮೂಡಿಸಲು ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಮೂಲಕ ಬಾಲಭವನದ ಚಟುವಟಿಕೆ ಗಳನ್ನು ರಾಜ್ಯದ ಇತರೆಡೆಗೂ ವಿಸ್ತರಿಸಲಾಗುತ್ತಿದೆ’ ಎಂದು ಪತ್ರಿಕಾ ಗೋಷ್ಠಿಯಲ್ಲಿ ಅವರು ಹೇಳಿದರು.

‘17 ವರ್ಷಗಳಿಂದ ಮಕ್ಕಳಿಗೆ ಕಲಾಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಪ್ರತಿ ತಾಲ್ಲೂಕಿನಿಂದ 9ರಿಂದ 16 ವಯಸ್ಸಿನ 8 ಮಕ್ಕಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಅಲ್ಲಿ ವಿಜೇತ ರಾದವರು ರಾಜ್ಯಮಟ್ಟದಲ್ಲಿ ಸ್ಪರ್ಧಿಸುವರು.

ಪ್ರತಿ ಜಿಲ್ಲೆಯಿಂದ 30 ಮಕ್ಕಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ನಂತರ ಇದರಲ್ಲಿ 21 ಮಕ್ಕಳಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗು ವುದು. ಈಗಾಗಲೇ ತಾಲ್ಲೂಕು ಕೇಂದ್ರ ಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆ ಯುತ್ತಿದೆ’ ಎಂದು ಮಾಹಿತಿ ನೀಡಿದರು.

4 ವಿಭಾಗಗಳಲ್ಲಿ ಆಯ್ಕೆ: ‘ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ ಹಾಗೂ ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ... ಈ 4 ವಿಭಾಗಗಳಲ್ಲಿ ಮಕ್ಕಳನ್ನು ಆಯ್ಕೆ ಮಾಡಲಾಗುವುದು. ರಾಜ್ಯ ಮಟ್ಟದಲ್ಲಿ 21 ಮಕ್ಕಳ ಜೊತೆಗೆ ಇಬ್ಬರು ವಿಶೇಷ ಮಕ್ಕಳನ್ನು ಸೇರಿಸಿ ಒಟ್ಟು 23 ಮಂದಿಗೆ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ₹ 5,000 ನಗದು ಬಹುಮಾನ, ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ’ ಎಂದು ವಿವರಿಸಿದರು.

‘ಮುಂದಿನ ವರ್ಷದಿಂದ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಮಕ್ಕಳು ಸ್ಪರ್ಧೆ ಮಾಡುವಂತೆ ಅವಕಾಶ ಒದಗಿಸಲು ಯೋಜಿಸಲಾಗಿದೆ. ವಿಶೇಷ ಮಕ್ಕಳಲ್ಲಿಯೂ ಆತ್ಮಸ್ಥೈರ್ಯ ತುಂಬುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.

‘ರಾಜ್ಯದ 30 ಜಿಲ್ಲೆಗಳ ಪೈಕಿ ಪ್ರಸ್ತುತ ಕೇವಲ 17 ಜಿಲ್ಲೆ ಹಾಗೂ 9 ತಾಲ್ಲೂಕುಗಳಲ್ಲಿ ಮಾತ್ರ ಬಾಲಭವನವಿದೆ. ಬಾಲಭವನಗಳಲ್ಲಿ ಕಾಯಂ ಸಿಬ್ಬಂದಿ ಇಲ್ಲ. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ, ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಹೀಗಾಗಿ, ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ಸಾಲಿನ ಚಟುವಟಿಕೆಗಳಿಗೆ ₹ 3.60 ಕೋಟಿ ಅನುದಾನ ಕೋರಲಾಗಿದೆ. ಸಮರ್ಪಕ ಅನುದಾನದ ಕೊರತೆಯಿಂದಾಗಿ ಬಹಳಷ್ಟು ಬಾಲಭವನಗಳಲ್ಲಿನ ಚಟುವಟಿಕೆಗಳು ಸ್ಥಗಿತಗೊಂಡಿದೆ. ನನ್ನ ಆಧಿಕಾರದ ಅವಧಿಯಲ್ಲಿ ಬಾಲಭವನಗಳಿಗೆ ಹೊಸ ರೂಪ ನೀಡುವುದಕ್ಕೆ ಆದ್ಯತೆ ನೀಡುತ್ತೇನೆ’ ಎಂದು ತಿಳಿಸಿದರು.

‘ಮುಂದಿನ ಸಾಲಿನಲ್ಲಿ ಬೆಂಗಳೂರಿನ 5ರಿಂದ 16 ವರ್ಷದ ಮಕ್ಕಳಿಗೆ ಕಿಡಥಾನ್‌, ಛಾಯಾಗ್ರಹಣ ಸ್ಪರ್ಧೆ, ನಾಟಕಕ್ಕೆ ಸಂಬಂಧಿಸಿದ ಅಭಿರಂಗ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.

‘ಬಾಲಭವನ ನಿರ್ಮಾಣಕ್ಕೆ 2–3 ಎಕರೆ ಜಾಗದ ಅವಶ್ಯಕತೆ ಇದೆ. ಅಲ್ಲಿ ಆಟಿಕೆಗಳು, ಮಕ್ಕಳಿಗೆ ಮಿನಿ ರೈಲು ಮೊದಲಾದ ಪರಿಕರಗಳನ್ನು ಅಳವಡಿಸಲಾಗುವುದು. ಈ ಸಂಬಂಧ ಜಾಗ ಒದಗಿಸುವಂತೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ’ ಎಂದು ಹೇಳಿದರು. ಬಾಲಭವನ ಕಾರ್ಯದರ್ಶಿ ರತ್ನಾ ಕಲಮದಾನಿ, ರಮೇಶಕುಮಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.