ADVERTISEMENT

‘ಮನುಷ್ಯನಲ್ಲಿ ನಕಾರಾತ್ಮಕ ಬದಲಾವಣೆ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:20 IST
Last Updated 18 ಏಪ್ರಿಲ್ 2017, 6:20 IST

ಹುಕ್ಕೇರಿ:  ಸಮಯ ಬದಲಾದಂತೆ ನಿಸರ್ಗ ಬದಲಾಗುವುದು ಸಹಜ. ಆದರೆ ಮನುಷ್ಯ ಕೂಡ ನಕಾರಾತ್ಮಕವಾಗಿ ಬದಲಾಗುತ್ತಿರುವುದು ಖೇಧಕರ ಎಂದು ಚಿಕ್ಕಾಲಗುಡ್ಡ ಸಿಬಿಎಸ್ಇ ಶಾಲೆಯ ಪ್ರಾಚಾರ್ಯ ಪಿ.ಪಿ. ಖವರೆ ಹೇಳಿದರು.ಅವರು ಹಿಡಕಲ್ ಡ್ಯಾಂನ ಸಂಕಲ್ಪ ಸಂಸ್ಥೆಯ ವೃದ್ಧಾಶ್ರಮಕ್ಕೆ ಶಂಕರಲಿಂಗ ಮಾಡೆಲ್ ಶಾಲೆಯ ಚೇರಮನ್ ಬಾಲಚಂದ್ರ ಹತನೂರಿ ಹಾಗೂ ಶಾಲಾ ಸಂಯೋಜಕಿ ಮಂಜುಳಾ ಹತನೂರಿ ಅವರ ಮಾರ್ಗದರ್ಶನದಲ್ಲಿ 'ಜ್ವಾಯ್ ಆಪ್ ಗಿವಿಂಗ್' ದಿನಾಚರಣೆ ಅಂಗವಾಗಿ ಸಿಬ್ಬಂದಿ ಹಾಗೂ ಮಕ್ಕಳೊಂದಿಗೆ ಭೇಟಿ ನೀಡಿ ಮಾತನಾಡಿದರು.

ಆಧುನಿಕತೆಯ ಭರಾಟೆಯಲ್ಲಿ ನಾಗರಿಕ ಸಮಾಜವು ನಿರ್ಲಕ್ಷಕ್ಕೊಳಗಾದ ವೃದ್ಧರನ್ನು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿ. ಮುಂದೊಂದು ದಿನ ತಾವು ಕೂಡಾ ವೃದ್ಧರಾಗುತ್ತೇವೆ ಎಂಬ ಅರಿವಿಲ್ಲದೆ ಈಗಿನ ಯುವ ಪೀಳಿಗೆ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವುದು ಅಮಾನವೀಯ ಸಂಗತಿ ಎಂದರು.ವೃದ್ಧರು ಸಮಾಜದ ಆಸ್ತಿ. ಅವರನ್ನು ಕಾಪಾಡುವುದು ನಮ್ಮೆಲ್ಲರ ಧರ್ಮ. ಗೀತೆಯಲ್ಲಿ ಹೇಳಿರುವಂತೆ ‘ಕರ್ಮಣ್ಯೆವಾಧಿಕಾರಸ್ತೆ ಮಾಫಲೇಶುಕದಾಚನ’ ಎಂಬಂತೆ ಎಲ್ಲರೂ ತಮ್ಮ ತಮ್ಮ ಕರ್ಮಗಳನ್ನು ನಿಯಮಿತವಾಗಿ ನಿರ್ವಹಿಸಿದರೆ ಆ ಭಗವಂತ ಒಳ್ಳೆ ಫಲಗಳನ್ನು ನೀಡುತ್ತಾನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದಿನೋಪಯೋಗಿ ದಿನಸಿಗಳನ್ನು ದೇಣಿಗೆ ನೀಡಲಾಯಿತು. ಶಿಕ್ಷಕರಾದ ಸಂಜೀವ ಫರ್ನಾಂಡಿಸ್, ಪುಷ್ಪಾ ಮುಷ್ಟಗಿ, ದೀಪಾ ಬೋರಗಾಂವಕರ, ರೂಬಿನಾ ಜಮಾದಾರ, ಭಾರತಿ ಕದಂ, ಸಂಸ್ಥೆಯ ಕಾರ್ಯದರ್ಶಿ ಜ್ಯೋತಿ ಗುರಕನವರ, ಮಂಜುಳಾ ಅಡಿಬಟ್ಟಿ, ರಮೇಶ ನಾಯಕ ಹಾಗೂ  ನಿವಾಸಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.  ವೃದ್ದಾಶ್ರಮದ ಜಯಶ್ರೀ ಶಿಳ್ಳಿ ಸ್ವಾಗತಿಸಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.