ADVERTISEMENT

ಶಾಸಕರಿಂದ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:20 IST
Last Updated 6 ನವೆಂಬರ್ 2017, 5:20 IST

ರಾಮದುರ್ಗ: ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಶಾಸಕ ಅಶೋಕ ಪಟ್ಟಣ ತಾಲ್ಲೂಕಿನ ಕಿಲ್ಲಾ ತೊರಗಲ್ ಸಮೀಪ ಶನಿವಾರ ವೀಕ್ಷಣೆ ಮಾಡಿದರು. ಏರಿ ಕೊರೆದು ಸಮತಟ್ಟಾದ ರಸ್ತೆ ನಿರ್ಮಾಣಕ್ಕೆ ₹ 1 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದನ್ನು ವೀಕ್ಷಿಸಿದ ಅವರು, ‘ಕಿಲ್ಲಾ ತೊರಗಲ್ ಸಮೀಪದ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‍ಗಳು ಏರಿ ಹತ್ತಲು ಹರಸಾಹಸ ಪಡುತ್ತಿದ್ದವು. ರೈತರ ತೊಂದರೆ ಗಮನಿಸಿ ಸಮತಟ್ಟಾದ ರಸ್ತೆ ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು. ‌

‘ಟ್ರ್ಯಾಕ್ಟರ್‍ಗಳಿಗೆ ಏರಿ ಹತ್ತಲು ತೊಂದರೆಯಾಗದಂತೆ ಸಮತಟ್ಟು ರಸ್ತೆ ನಿರ್ಮಿಸಬೇಕು. ರೈತರಿಗೆ ಉಂಟಾಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಕಾಮಗಾರಿ ಮಾಡಬೇಕು’ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಕೆ. ನಿಂಗನೂರೆ, ಕಿರಿಯ ಎಂಜಿನಿಯರ್ ರವಿಕುಮಾರ, ಗುತ್ತಿಗೆದಾರ ಬಿ.ಎಂ. ಪಾಟೀಲ ಇದ್ದರು.

₹ 5 ಲಕ್ಷ ಸಹಾಯಧನ ವಿತರಣೆ: ತಾಲ್ಲೂಕಿನ ಸಿದ್ನಾಳದ ಬೀರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹ 5 ಲಕ್ಷ ಸಹಾಯಧನವನ್ನು ಶಾಸಕ ಅಶೋಕ ಪಟ್ಟಣ ಗ್ರಾಮದ ಮುಖಂಡರಿಗೆ ಶನಿವಾರ ವಿತರಿಸಿದರು.

ADVERTISEMENT

ಕೆ. ಚಂದರಗಿ ಗ್ರಾಮದಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ನಾಳ ಗ್ರಾಮದ ಮುಖಂಡರಿಗೆ ಚೆಕ್‌ ನೀಡಿದರು. ಅರ್ಧಕ್ಕೆ ನಿಂತಿರುವ ಬೀರಲಿಂಗೇಶ್ವರ ದೇವಸ್ಥಾನವನ್ನು ಸುಸಜ್ಜಿತವಾಗಿ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಎಪಿಎಂಸಿ ಸದಸ್ಯ ಎನ್.ಬಿ. ದಂಡಿನದುರ್ಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನಮಂತ ಕೌಜಲಗಿ, ಮುಖಂಡರಾದ ಉದಯ ಸೋಮನಟ್ಟಿ, ಶಿವಲಿಂಗಯ್ಯ ಹಿರೇಮಠ, ವಿಜಯಂದ್ರ ನಿಂಬಾಳಕರ, ಬಸನಗೌಡ ಪಾಟೀಲ, ಈರಣ್ಣ ನವರಕ್ಕಿ, ಪ್ರಕಾಶ ಮುರಕಟ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.