ADVERTISEMENT

’ಸೇವೆ, ಶ್ರಮದಾನ ಭಾವ ಅಗತ್ಯ‘

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:08 IST
Last Updated 11 ನವೆಂಬರ್ 2017, 5:08 IST

ಬೈಲಹೊಂಗಲ: ‘ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಕಲಿಕಾ ಜೀವನ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಂಡು ಶ್ರಮದಾನ ಮಾಡಿದರೆ ಭವ್ಯ ಭಾರತ ನಿರ್ಮಾಣದ ಕನಸು ನನಸಾಗಲು ಸಾಧ್ಯವಿದೆ’ ಎಂದು ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ತಾಲ್ಲೂಕಿನ ವಕ್ಕುಂದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

’ಇಂದಿನ ವಿದ್ಯಾರ್ಥಿಗಳಲ್ಲಿ ಶ್ರಮದಾನದ ಕೊರತೆ ಇದೆ. ಇಂತಹ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ದುಡಿಮೆ ಮಹತ್ವ ತಿಳಿಸಿ ಕೊಡುವುದರೊಂದಿಗೆ ನಾಯಕತ್ವದ ಗುಣ, ಹೊಂದಾಣಿಕೆ, ಸಹಕಾರ, ಹಳ್ಳಿಯ ಪರಿಸರದ ಬಗ್ಗೆ ತಿಳಿವಳಿಕೆ ಮೂಡಿಸುತ್ತವೆ.  ವಿದ್ಯಾರ್ಥಿಗಳಲ್ಲಿ ಉದಾತ್ತ ಗುಣಗಳನ್ನು ಬೆಳೆಸಲು ಹೆಚ್ಚಿನ ಸಹಕಾರಿ ಆಗಿವೆ’ ಎಂದರು.

ADVERTISEMENT

ಪ್ರಾಚಾರ್ಯ ಎಂ.ಬಿ. ಇಂಗಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ದೈಹಿಕ ಶ್ರಮದ ಮಹತ್ವವನ್ನು ತಿಳಿಸಿಕೊಡುವ ಉತ್ತಮ ಯೋಜನೆಯಾಗಿದೆ. ಪ್ರತಿಯೊಬ್ಬ ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ಶ್ರೀಶೈಲ ಯಡಳ್ಳಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಬಸನಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಉಪಾಧ್ಯಕ್ಷ ಭಾರತಿ ಇಳಿಗೇರ, ಜಾನಪದ ಕಲಾವಿದ ಸಿ.ಕೆ. ಮೆಕ್ಕೇದ, ಗಜದಂಡ ಸುತಗಟ್ಟಿ, ಸಂಗಣ್ಣ ಭದ್ರಶೆಟ್ಟಿ, ಕೆ.ಬಿ. ಕೋಟಗಿ, ನಿವೃತ್ತ ಮುಖ್ಯಶಿಕ್ಷಕ ಜೆ.ವಿ. ಹಿರೇಮಠ, ಉಪನ್ಯಾಸಕ ಎಂ. ಹುಕ್ಕೇರಕರ. ಬಿ.ಎಂ. ಕೊಳವಿ, ಎಚ್.ಆರ್. ಪಾಟೀಲ, ಎ.ಎಲ್. ಮಜ್ಜಗಿ, ಆರ್.ಬಿ. ಹುನಗುಂದ, ಜೆ.ಎಂ. ಚೊಳಖೆ, ನಂದಿನಿ ಎಂ. ಇದ್ದರು. ಉಪನ್ಯಾಸಕ ಬಸವರಾಜ ಪುರಾಣಿಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್. ಕರ್ಕಿ ನಿರೂಪಿಸಿದರು. ಶಿಬಿರಾಧಿಕಾರಿ ಬಿ.ಸಿ. ಅಡಕಿ ಸ್ವಾಗತಿಸಿದರು. ಬಿ.ಎಫ್. ಕುರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.