ಮೋಳೆ: ನೂರಾರು ಕೆ.ಜಿ ತೂಕದ ಗುಂಡುಗಳನ್ನು ಹಾಗೂ ಭಾರವಾರ ಸಂಗ್ರಾಮ ಕಲ್ಲುಗಳನ್ನು ಎತ್ತುವ ಸ್ಪರ್ಧೆಯಲ್ಲಿ ಬಲಭೀಮರು ಹಾಗೂ ಅವರಿಂದ ಪ್ರೇರಣೆಗೊಂಡ ಹತ್ತಾರು ಯುವಕರು ನಾ ಮುಂದು ತಾ ಮುಂದೆ ಎಂದು ಶಕ್ತಿ ಪ್ರದರ್ಶನ ಮಾಡಿದರು.
ಅಥಣಿ ತಾಲ್ಲೂಕಿನ ಐನಾಪೂರ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರೆಯ ನಿಮಿತ್ತ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗುಂಡು ಎತ್ತುವ ಹಾಗೂ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಈ ಅಪೂರ್ವ ಸಾಹಸ ದೃಶ್ಯಗಳಿಗೆ ಮೈದಾನ ಸಾಕ್ಷಿಯಾಯಿತು.
ವಿಜಯಪೂರ, ಬಾಗಲಕೋಟ, ಹುನಗುಂದ ಜಮಖಂಡಿ, ಅಥಣಿ, ಗೋಕಾಕ ಸೇರಿದಂತೆ ಪಕ್ಕದ ಮಹಾರಾಷ್ಟ್ರದಿಂದ ಬಂದ ಬಲಭೀಮರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಗುಂಡು ಎತ್ತುವ ಸ್ಪರ್ಧೆಯಲ್ಲಿ ವಿಜಯಪೂರದ ಶಿವಲಿಂಗಪ್ಪ ಶಿರೂರ 185 ಕೆ.ಜಿ ತೂಕದ ಗುಂಡನ್ನು ಎತ್ತಿ ಪ್ರಥಮ ಸ್ಥಾನ ಪಡೆಯುವ ಮೂಲಕ ₹7,001 ನಗದು ಬಹುಮಾನ ಪಡೆದರು. 175 ಕೆ.ಜಿ ತೂಕದ ಗುಂಡು ಎತ್ತಿ ದ್ವಿತೀಯ ಬಹುಮಾನವನ್ನು ಮುದ್ದೇಬಿಹಾಳದ ಚಂದ್ರಶೇಖರ ಯಳವಾರ ಪಡೆದರು. ಭೀಮಪ್ಪ ಪೂಜಾರಿ 164 ಕೆ.ಜಿ ಗುಂಡು ಎತ್ತಿ ತೃತೀಯ ಸ್ಥಾನ ಪಡೆದರು. 164 ಕೆ.ಜಿ ಗುಂಡನ್ನು ಬಾಗೇವಾಡಿಯ ಮಹಾಲಿಂಗಪ್ಪ ಯಳವಾರ ಮತ್ತು ಯಮನಪ್ಪ ಎತ್ತುವ ಮೂಲಕ ನಾಲ್ಕನೇ ಸ್ಥಾನ ಪಡೆದರು.
ಸಂಗ್ರಾಮ ಕಲ್ಲು ಸ್ಪರ್ಧೆ: ಜಮಖಂಡಿಯ ಕರೆಪ್ಪ ಅಬ್ಬುನವರ ಪ್ರಥಮ, ಬಾದಾಮಿಯ ಆನಂದ ಬಾಬು ಕದಮಥಣಿ ದ್ವಿತೀಯ, ಗೋಕಾಕದ ಸಿದ್ದಪ್ಪ ಹೊಸಮನಿ ತೃತೀಯ ಹಾಗೂ ಜಮಖಂಡಿಯ ಆನಂದ ಕಂಬಳಿ 4ನೇ ಬಹುಮಾನ ಪಡೆದರು.
ಮುಖಂಡರಾದ ಚಂದ್ರಶೇಖರ ಗಾಣಿಗೇರ ಸ್ಪರ್ಧೆ ಉದ್ಘಾಟಿಸಿದರು. ತಾತ್ಯಾಸಾಬ ಕುಚನೂರೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಹಾವೀರ ಗುಂಡಾಳೆ, ಪ್ರದೀಪ ಗುಂಡಾಳೆ, ಅಜೀತ ಹಚ್ಚಿಬಟ್ಟಿ, ಯಶವಂತ ಪಾಟೀಲ, ಪ್ರಕಾಶ ಸತ್ತಿ, ಪ್ರವೀಣ ಕುಲಕುರ್ಣಿ, ಮೋಹನ ಗಾಣಿಗೇರ ಹಾಗೂ ಸತೀಶ ಗಾಣಿಗೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.