ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅನುಮತಿ ಪಡೆಯದೆ, ಜಾಹೀರಾತು ಫಲಕಗಳನ್ನು ಅಳವಡಿಸಿದ್ದ ನಾಲ್ವರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಕ್ರಮ ಜಾಹೀರಾತು ಫಲಕಗಳನ್ನು ಗುರುತಿಸಿದ್ದ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಯಶವಂತರಾಜ್ ಸೋಮವಾರ ದೂರು ನೀಡಿದ್ದಾರೆ. ‘ಅನನ್ಯ ಎಂಟರ್ಪ್ರೈಸಸ್’ ಮಾಲೀಕ ಶಿವಕುಮಾರ್, ‘ಅವಿನಾಶಿ ಆ್ಯಡ್ಸ್’ ಮಾಲೀಕ ಅಣ್ಣಾರಾಯ ಹಾಗೂ ಹುಚ್ಚಪ್ಪ ಮತ್ತು ಮಲ್ಲಪ್ಪ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.
ಮೂಡಲಪಾಳ್ಯದ ಶಿವಾನಂದನಗರ 6ನೇ ಅಡ್ಡರಸ್ತೆಯಲ್ಲಿ ಆರೋಪಿ ಶಿವಕುಮಾರ್, ಬೃಹತ್ ಜಾಹೀರಾತು ಫಲಕ ಅಳವಡಿಸಿದ್ದರು. ಅಣ್ಣಾರಾಯ ಸಹ ಗೆದ್ದಲಹಳ್ಳಿಯ ಜಿ.ಎಂ.ಆರ್ ಬಡಾವಣೆಯ 3ನೇ ಮುಖ್ಯರಸ್ತೆಯಲ್ಲಿ ಫಲಕ ಹಾಕಿದ್ದರು. ಜತೆಗೆ, ಹುಚ್ಚಪ್ಪ ಮತ್ತು ಮಲ್ಲಪ್ಪ, ಮೂಡಲಪಾಳ್ಯದ ನಾಗರಬಾವಿ ಮುಖ್ಯರಸ್ತೆಯಲ್ಲಿ ಫಲಕಗಳನ್ನು ಅಳವಡಿಸಿ ನಗರದ ಸೌಂದರ್ಯವನ್ನು ವಿರೂಪಗೊಳಿಸಿದ್ದರು.
ನಾಲ್ವರು ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದಿರುವುದು ಗೊತ್ತಾಗಿದೆ. ಪ್ರಕರಣ ಸಂಬಂಧ ಆರೋಪಿಗಳಿಗೆ ನೋಟಿಸ್ ನೀಡಿದ್ದೇವೆ. ಅದಕ್ಕೆ ಉತ್ತರ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.