ಬೆಂಗಳೂರು: ‘ರಾಜ್ಯೋತ್ಸವ ಮತ್ತು ಅಣ್ಣಮ್ಮದೇವಿ ಉತ್ಸವಕ್ಕೆ ಶಾಮಿಯಾನ ಹಾಕುವುದಕ್ಕೆ ಅನುಮತಿ ನೀಡಲು ಲಂಚ ಪಡೆಯುತ್ತಿದ್ದರು’ ಎಂಬ ಆರೋಪದ ಮೇರೆಗೆ ಸರ್ಜಾಪುರ ರಸ್ತೆಯ ಅಗ್ನಿಶಾಮಕ ಠಾಣಾಧಿಕಾರಿ ಗುರುಮೂರ್ತಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ.
‘ಅನುಮತಿ ನೀಡಲು ಗುರುಮೂರ್ತಿ ₹ 15 ಸಾವಿರ ಲಂಚದ ಬೇಡಿಕೆ ಇರಿಸಿದ್ದರು. ನಂತರ ₹ 10 ಸಾವಿರಕ್ಕೆ ಒಪ್ಪಿಕೊಂಡಿದ್ದರು. ಮುಂಗಡವಾಗಿ ₹1 ಸಾವಿರ ನೀಡಲಾಗಿತ್ತು. ಬಾಕಿ ₹9 ಸಾವಿರವನ್ನು ಶನಿವಾರ (ನ.18) ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ’ ಎಂದು ಎಸಿಬಿ ಕಚೇರಿ ಪ್ರಕಟಣೆ ತಿಳಿಸಿದೆ.
ನಗರದ ದೊಡ್ಡಕನ್ನಹಳ್ಳಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ಕನ್ನಡ ರಾಜ್ಯೋತ್ಸವ ಮತ್ತು ಅಣ್ಣಮ್ಮದೇವಿ ಉತ್ಸವಕ್ಕೆ ಶಾಮಿಯಾನ ಅಳವಡಿಸಲು ಅನುಮತಿ ಕೋರಿ ಅಗ್ನಿಶಾಮಕ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಲಂಚದ ಬೇಡಿಕೆ ಇರಿಸಿದ್ದಾರೆ ಎಂದು ಗುರುಮೂರ್ತಿ ವಿರುದ್ಧ ಎಸಿಬಿಗೆ ದೂರು ನೀಡಿದ್ದರು.
ಗುರುಮೂರ್ತಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಅನುಸಾರ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.